ADVERTISEMENT

ಗ್ರಾಮೀಣ ಪ್ರದೇಶಕ್ಕೂ ಸೇವಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 6:25 IST
Last Updated 23 ಫೆಬ್ರುವರಿ 2011, 6:25 IST

ಹರಪನಹಳ್ಳಿ: ಪಟ್ಟಣದಲ್ಲಿ ತೆರೆಯಲಾಗಿರುವ ಬೆಸ್ಕಾಂ ಗ್ರಾಹಕರ ಸೇವಾ ಕೇಂದ್ರಗಳನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸುವ ಆವಶ್ಯಕತೆ ಇದೆ ಎಂದು ಬೆಸ್ಕಾಂ ಎಂಜಿನಿಯರ್ ಭೀಮಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಬೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಾಹಕರ ಕುಂದು-ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕೇವಲ ಬಿಲ್ ಪಾವತಿಗೋಸ್ಕರ 30-40 ಕಿ.ಮೀ. ದೂರದ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಗ್ರಾಹಕರ ತತ್‌ಕ್ಷಣದ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವುದು ವಿಳಂಬವಾಗುತ್ತದೆ. ಹಾಗಾಗಿ, ಸಿಬ್ಬಂದಿ ಅಸಹಾಯಕರಾಗುತ್ತಾರೆ. ಇದನ್ನು ತಪ್ಪಿಸಲು ಸೇವಾಕೇಂದ್ರದ ಆವಶ್ಯಕತೆ ಇದೆ ಎಂದರು.

ದಿನದ 24ತಾಸು ಬಿಲ್ ಪಾವತಿಸುವ ಘಟಕ ಕೇವಲ ಪಟ್ಟಣದಲ್ಲಿ ಮಾತ್ರ ಇದೆ. ಪಟ್ಟಣ ಇನ್ನೊಂದು ಭಾಗದಲ್ಲಿ ಈ ಸೇವೆಯನ್ನು ಆರಂಭಿಸುವಂತೆ ಟಿ.ಎಂ. ಚಂದ್ರಶೇಖರಯ್ಯ ಕೋರಿದರು. ಈಗಾಗಲೇ ಇನ್ನೊಂದು ಬಿಲ್ ಪಾವತಿಗೆ ಸೇವಾಕೇಂದ್ರ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಉತ್ತರಿಸಿದರು.

ಅಭಿವೃದ್ಧಿ ಕಾರ್ಯಗಳ ಆಧುನೀಕರಣಕ್ಕಾಗಿ ` 3ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸೇವೆ ಒದಗಿಸಲು ಸಾಧ್ಯವಾಗಿಲ್ಲ ಎಂದರು.ಲೇಸರ್ ಪ್ರಿಂಟ್ ಕಾಗದದ ರಸೀದಿ ಬಹುಬೇಗನೆ ಹಾಳಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹೋಟೆಲ್ ಉದ್ಯಮಿ ಕೆ. ರಾಮಚಂದ್ರರಾವ್ ಮನವಿ ಮಾಡಿದರು.

ಎಲ್ಲಾ ಮಾಸಿಕ ಬಿಲ್‌ಗಳ ಸಮಗ್ರ ವಿವರವನ್ನು ಕೇವಲ` 10 ಪಾವತಿಸಿದರೆ ಕಂಪೆನಿಯೇ ಒದಗಿಸುತ್ತದೆ. ಅಧಿಕ ಮೊತ್ತದ ಠೇವಣಿ ರೂಪದ ಹಣ ಪಾವತಿಗೆ ಕೂಡಲೇ ಮೇಲಧಿಕಾರಿಗಳ ಜತೆ ಚರ್ಚಿಸಿ ಛಾಪಾ ಕಾಗದದ ಮಾದರಿಯಲ್ಲಿ ಗ್ರಾಹಕರಿಗೆ ನೀಡಲು ಯೋಚಿಸಲಾಗುವುದು ಎಂದು ಎಇಇ ಜಯಪ್ಪ ಉತ್ತರಿಸಿದರು.

ಪ್ರತಿ ತಿಂಗಳು ನಾಲ್ಕು ಬಾರಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಕುಂದು-ಕೊರತೆ ಸಭೆ ಆಯೋಜಿಸಲಾಗುವುದು. ವಿವಿಧ ಬಳಕೆಯ ಗ್ರಾಹಕರಿಂದ `1.4ಕೋಟಿ ಇದೆ. ಗೃಹ ಬಳಕೆದಾರರಿಂದ ` 94ಲಕ್ಷ, ವಾಣಿಜ್ಯ ಉದ್ದೇಶಗಳ ಗ್ರಾಹಕರಿಂದ ` 6ಲಕ್ಷ, ಪವರ್ ಜಕಾತಿ ಬಳಕೆದಾರರಿಂದ ` 4ಲಕ್ಷ ಬಾಕಿ ಕಂಪೆನಿಗೆ ಬರಬೇಕಿದೆ. ಗ್ರಾಮೀಣ ಪ್ರದೇಶದ ಗೃಹಪಯೋಗಿ ಬಳಕೆದಾರರು ಬಿಲ್ ಪಾವತಿಸಿ ಹೆಚ್ಚಿನ ಸೇವೆ ಒದಗಿಸಲು ಸಹಕರಿಸುವಂತೆ ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.