ಚನ್ನಗಿರಿ: ಚುಟುಕು ಸಾಹಿತ್ಯ ಮನಸ್ಸನ್ನು ಅರಳಿಸುವ ಗುಣ ಹೊಂದಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯದ ರುಚಿ ಇಲ್ಲದವರು ಪಶುವಿಗೆ ಸಮಾನ ಎನ್ನುತ್ತಾರೆ. ನಾವು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನ ಇರಬೇಕು; ದುರಭಿಮಾನ ಇರಬಾರದು. ಕನ್ನಡ ನೆಲ-ಜಲದ ಬಗ್ಗೆ ಅಭಿಮಾನ ಇಟ್ಟುಕೊಂಡು, ಧಕ್ಕೆಯಾದಾಗ ಹೋರಾಟಕ್ಕೂ ಇಳಿಯುವಂತೆ ಕರೆ ನೀಡಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರಪ್ಪ ಗುಂಡಗತ್ತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಓ.ಎಸ್. ನಾಗರಾಜ್, ಬಿಇಒ ಜಿ.ಆರ್. ತಿಪ್ಪೇಶಪ್ಪ, ಕೆ. ಸಿರಾಜ್ ಅಹಮದ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ.ಆರ್. ಲೋಕೇಶ್ವರಯ್ಯ ನೂತನವಾಗಿ ಆಯ್ಕೆಯಾದ ಎಸ್. ಶಂಕರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಲಾವಿದ ಶಾಂತನಾಯ್ಕ ಹಾಗೂ ಎಂ. ಮಲ್ಲೇಶಪ್ಪ ತಂಡದವರು ಜಾಗೃತಿ ಗೀತೆಗಳನ್ನು ಹಾಡಿದರು.
ಸುರೇಶ್ ಪ್ರಾರ್ಥಿಸಿದರು. ಎಸ್. ಶಂಕರಪ್ಪ ಸ್ವಾಗತಿಸಿದರು. ಎಂ.ಬಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.