ದಾವಣಗೆರೆ: ಕರ್ನಾಟಕ ಜನತಾ ಪಕ್ಷದಿಂದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪಕ್ಷದ ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ್ ಅವರಿಗೆ ಟಿಕೆಟ್ ಕೈತಪ್ಪಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪಕ್ಷದ ವರಿಷ್ಠರ ತೀರ್ಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೆಜೆಪಿ ಸಾರಥ್ಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಿಕೊಂಡ ದಿನದಿಂದ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಜಗದೀಶ್ ಶ್ರಮಿಸಿದ್ದಾರೆ. ಅವರು ಉತ್ತರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ, ಅವರ ಬದಲಿಗೆ ಮತ್ತೊಬ್ಬರಿಗೆ `ಬಿ' ಫಾರಂ ಕೊಡಲಾಗಿದೆ. ಇದು ಖಂಡನೀಯ. ಕಾರ್ಯಕರ್ತರು, ಮುಖಂಡರ ಸಲಹೆ ಕೇಳದೇ, ಸಮಾಲೋಚಿಸದೇ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಈ ಪಕ್ಷದಲ್ಲಿ ಪ್ರಜಾಪ್ರಭುತ್ವಕ್ಕೆ ತಕ್ಕಂತೆ ವ್ಯವಸ್ಥೆಯಿದೆ. ದುಡಿದವರಿಗೆ ಮಾನ್ಯತೆ ಸಿಗುತ್ತದೆ ಎಂದು ಮತ್ತೊಂದು ಪಕ್ಷ ಬಿಟ್ಟು ಬಂದೆವು. ಆದರೆ, ಪಕ್ಷಕ್ಕೆ ದುಡಿದವರಿಗೆ ಬೆಲೆ ಇಲ್ಲದಂತಾಗಿದೆ. ಕೂಡಲೇ ವರಿಷ್ಠರು ನಿರ್ಧಾರ ಹಿಂತೆಗೆದುಕೊಳ್ಳಬೇಕು. ಜಗದೀಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಸಂಚಾಲಕ ಬಿ.ಎಸ್. ಜಗದೀಶ್, ಮುಖಂಡರಾದ ಹೇಮಂತ್ ಕುಮಾರ್, ನಿಟುವಳ್ಳಿ ಬಸವರಾಜ್, ಬಿರಾದಾರ್, ಷಣ್ಮುಖಯ್ಯ, ಕಡ್ಲೇಬಾಳು ಬಸವರಾಜ್, ಕೊಟ್ರೇಶ್, ಕಲ್ಲೇಶ್, ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಜಗದೀಶ್, `ನಾನು ಏ. 17ರಂದು ಪಕ್ಷದಿಂದ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೆ. ಮಂಗಳವಾರ ಬೇರೊಬ್ಬರಿಗೆ `ಬಿ' ಫಾರಂ ಕೊಡಲಾಗಿದೆ. ಇದರಿಂದ ಬಹಳ ಬೇಸರವಾಗಿದೆ.
ಜಿಲ್ಲಾ ಸಂಚಾಲಕನಾದ ನನ್ನ ಜತೆ ಸೌಜನ್ಯಕ್ಕೂ ಸಮಾಲೋಚನೆ ನಡೆಸದೇ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ಧಾರವನ್ನು ಮುಖಂಡರು ಹಿಂಪಡೆಯುತ್ತಾರೆ. ನನಗೇ ಪಕ್ಷದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. `ಬಿ' ಫಾರಂ ಸಿಕ್ಕಲ್ಲಿ, ಬುಧವಾರ ನಾಮಪತ್ರ ಸಲ್ಲಿಸುತ್ತೇನೆ. ಒಟ್ಟಿನಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.