ಹರಪನಹಳ್ಳಿ: ಮೊರಾರ್ಜಿದೇಸಾಯಿ ವಸತಿಶಾಲೆಯಲ್ಲಿನ ಕೆಲ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ನಿರ್ವಾಹಕ ನಿರ್ದೇಶಕರ ಕ್ರಮ ವಿರೋಧಿಸಿ ತಾಲ್ಲೂಕಿನ ಕನ್ನಾಯಕನಹಳ್ಳಿ ವಸತಿಶಾಲೆ ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ಶಾಲೆ ಆರಂಭವಾದಾಗಿನಿಂದ ಹೊರ ಸಂಪನ್ಮೂಲದ ಶಿಕ್ಷಕರ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಕಳೆದವರ್ಷ `ಕ್ರೈಸ್' ನೇರ ನೇಮಕಾತಿ ಮೂಲಕ ಶಾಲೆಗೆ ಕಾಯಂ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಿದೆ. ನೇರ ನೇಮಕಾತಿ ಮೂಲಕ ಆಯ್ಕೆಯಾದ ಶಿಕ್ಷಕರು ನಮಗೆ ಅತ್ಯುತ್ತಮವಾದ ಪಾಠ, ಪ್ರವಚನಗಳನ್ನು ಬೋಧಿಸುತ್ತಿದ್ದರು.
ಕಾಯಂ ಶಿಕ್ಷಕರು ನೇಮಕವಾದ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಶೇ.100ರಷ್ಟು ಫಲಿತಾಂಶ ಶಾಲೆಗೆ ಲಭಿಸಲು ಕಾರಣವಾಗಿದೆ. ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಜ್ಞಾನದ ಧಾರೆ ಎರೆಯುತ್ತಿರುವ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಬಂದಿರುವ ನಮ್ಮ ಕನಸುಗಳನ್ನು ನುಚ್ಚುನೂರು ಮಾಡಲು ಕ್ರೈಸ್ ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ವರ್ಗಾವಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿರುವ ಸ್ಥಳಕ್ಕೆ ಇಲಾಖೆಯ ಜಿಲ್ಲಾ ಅಧಿಕಾರಿ ಬರುವರೆಗೂ ತರಗತಿಗೆ ಹಾಜರಾಗುವುದಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.