ADVERTISEMENT

ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 7:50 IST
Last Updated 22 ಮೇ 2012, 7:50 IST

ಹರಿಹರ: ನಗರಸಭೆ ಅಧ್ಯಕ್ಷ ವಿಶ್ವನಾಥ ಭೂತೆ, ಸೋಮವಾರ ಘನ ತ್ಯಾಜ್ಯವಸ್ತುಗಳ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಕಾಂಕ್ರೀಟ್ ರಸ್ತೆ ಹಾಗೂ ಕಸ ವಿಂಗಡಿಸುವ ಘಟಕದ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13ನೇ ಹಣಕಾಸು ಯೋಜನೆ ಅಡಿಯಲ್ಲಿ ರೂ. 4.40ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಎಸ್‌ಎಫ್‌ಸಿ ಅನುದಾನದ ರೂ. 4.5ಲಕ್ಷ ವೆಚ್ಚದಲ್ಲಿ ಕಸ ವಿಂಗಡಿಸುವ ಘಟಕದ ಕಾಮಗಾರಿ ನಡೆದಿದೆ. ಘನತ್ಯಾಜ್ಯ ವಸ್ತುಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ, ಗಾಜಿನ ತ್ಯಾಜ್ಯ ಹಾಗೂ ಇತರೆ ಕೊಳೆತು ಗೊಬ್ಬರವಾಗದ ವಸ್ತುಗಳನ್ನು ವಿಂಗಡನೆ ಮಾಡುವ ಉದ್ದೇಶದಿಂದ ಕಸ ವಿಂಗಡಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಘಟಕದ ಕಾಮಗಾರಿ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಘಟಕ ಕಾರ್ಯ ಪ್ರಾರಂಭಿಸಲಿದೆ ಎಂದು ತಿಳಿಸಿದರು.

ತ್ಯಾಜ್ಯ ಘಟಕದ ಕೊಳೆತು ಗೊಬ್ಬರವಾಗಿ ಮಾರ್ಪಟ್ಟ ತ್ಯಾಜ್ಯವನ್ನು ಸೋಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಿದರೆ, ರೈತರಿಗೂ ಉತ್ತಮ ಗೊಬ್ಬರ ದೊರೆತಂತೆ ಆಗುತ್ತದೆ. ಅಲ್ಲದೇ, ನಗರಸಭೆಗೂ ಲಾಭ ದೊರೆಯುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೂಡಲೇ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ನಂತರ, ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ನಗರಸಭೆ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ನಗರಸಭೆ ಎಇಇ ಮಹಮದ್ ಗೌಸ್, ಸಹಾಯಕ ಎಂಜಿನಿಯರ್ ಎಂ.ಎನ್. ದಳವಾಯಿ, ಸಿ.ಬಿ. ಮಾಲತೇಶ್ ಹಾಗೂ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.