ಹರಪನಹಳ್ಳಿ: ಪಟ್ಟಣದ ಹರಿಹರ ರಸ್ತೆಯ ಆಸರೆ ಬಡಾವಣೆ ಸಮೀಪದಲ್ಲಿರುವ ದಿಗಂಬರ ಜೈನ ಪರಂಪರೆಯ ಪುರಾತನ ಪಾರ್ಶ್ವನಾಥ-ಪದ್ಮಾವತಿ ಬಸದಿಯ ಗರ್ಭಗುಡಿಯಲ್ಲಿ ನಿಧಿ ಆಸೆಗಾಗಿ ನಾಗದೇವತಾ ಮೂರ್ತಿಯನ್ನು ಸ್ಥಾನಪಲ್ಲಟ ಮಾಡಿದ ಶನಿವಾರ ರಾತ್ರಿ ದುಷ್ಕರ್ಮಿಗಳು, ಮೂರ್ತಿ ಕೆಳಭಾಗದ ನೆಲ ಅಗೆದು ಪರಾರಿಯಾಗಿದ್ದಾರೆ.
ಸುಮಾರು ಒಂದೂವರೆ ಟನ್ಗೂ ಅಧಿಕ ಭಾರ ಹೊಂದಿರುವ, 5 ಅಡಿ ಎತ್ತರದ ಏಕಶಿಲೆಯ ನಾಗದೇವತಾ ಮೂರ್ತಿ ಎಡೆಯಲ್ಲಿ, ಪಾರ್ಶ್ವನಾಥ ತೀರ್ಥಂಕರ ಹಾಗೂ ಪಕ್ಕದಲ್ಲಿ ಪದ್ಮಾವತಿ ಮೂರ್ತಿಯಿದೆ. ಅವುಗಳ ಕೆಳಭಾಗದಲ್ಲಿನ ಬಂಡೆಗಲ್ಲುಗಳನ್ನು ಮೇಲೆತ್ತಿ, ಸುಮಾರು ಐದಾರು ಅಡಿಗಳಷ್ಟು ನೆಲ ಶೋಧಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಜೈನ ಸಮಾಜದ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿತು. ಬಸದಿಯ ಎದುರಿನ ಗುಡ್ಡದ ಮೇಲಿರುವ ಬ್ರಹ್ಮದೇವರ ಬಸದಿಯನ್ನು ಮೂರು ಸುತ್ತು, ಸುತ್ತಿದ ಶ್ವಾನದಳ, ಬಳಿಕ, ಹರಿಹರ ರಸ್ತೆಯವರೆಗೂ ಶೋಧಿಸಿತು.
ಘಟನೆಯಿಂದ ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಬೇಕು ಮುಖಂಡರು ಒತ್ತಾಯಿಸಿದ್ದಾರೆ.
ದಿಗಂಬರ ಜೈನಧರ್ಮದ ಶಾಂತಿನಾಥ ಟ್ರಸ್ಟ್ ಕಾರ್ಯದರ್ಶಿ ಕೆ. ಮೋಹನ್ ದೂರು ನೀಡಿದದಾರೆ. ಘಟನಾ ಸ್ಥಳಕ್ಕೆ ಸಿಪಿಐ ಮಹಾಂತೇಶ್ ಈ. ಸಜ್ಜನ್, ಪಿಎಸ್ಐ ವಸಂತ ವಿ. ಅಸೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.