ADVERTISEMENT

ನೀತಿಸಂಹಿತೆ ಉಲ್ಲಂಘಿಸಿದ ಶಾಸಕ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:35 IST
Last Updated 15 ಮಾರ್ಚ್ 2011, 6:35 IST

ದಾವಣಗೆರೆ: ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಬಳಿಕ ಶಾಸಕ ಎಂ. ಬಸವರಾಜ ನಾಯ್ಕ ಅಲ್ಲಿನ ಸಭಾಂಗಣದೊಳಗೆ ಅಭಿನಂದನಾ ಸಭೆಯಲ್ಲಿ ಪಕ್ಷದ ಗುಣಗಾನ ಮಾಡಿದ್ದು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸೋಮವಾರ ಚರ್ಚೆಗೆ ಗ್ರಾಸವಾಯಿತು.ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 12ರಿಂದು ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಸರ್ಕಾರಿ ವಾಹನದಲ್ಲಿಯೇ ತಾ.ಪಂ.ಗೆ ಬಂದ ಶಾಸಕರು, ನೂತನ ಅಧ್ಯಕ್ಷೆ ಪ್ರತಿಭಾ ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷ ಎಚ್.ಎಂ. ಶಿವರುದ್ರಪ್ಪ ಅವರನ್ನು ಅಭಿನಂದಿಸಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ತಾಲ್ಲೂಕು ಪಂಚಾಯ್ತಿಯ ಅನುದಾನದ ಮೊತ್ತ ಹೆಚ್ಚಿಸಲಾಗಿದೆ. ಸದಸ್ಯರ ವೇತನವನ್ನೂ ಹೆಚ್ಚಿಸಲಾಗಿದೆ. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಲ್ಲಿ ಸಭಾಂಗಣ ನಿರ್ಮಿಸಲಾಗಿತ್ತು. ಇದೀಗ ಮತ್ತಷ್ಟು ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಬಿಜೆಪಿ ಪಾಲಿಗೆ ಇದೊಂದು ಐತಿಹಾಸಿಕ ದಿನ. ಸ್ಥಳೀಯವಾಗಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳು ಮೊದಲಬಾರಿಗೆ ಬಿಜೆಪಿ ತೆಕ್ಕೆಗೆ ಬಂದಿವೆ. ಅದಕ್ಕೆ ಕಾರಣರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ತಾಲ್ಲೂಕಿನಲ್ಲಿ ಬಿಜೆಪಿ ಸಂಸದರು, ಸಚಿವರು ಶಾಸಕರು, ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಎಲ್ಲರ ನೆರವಿನೊಂದಿಗೆ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ರೂಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ?: ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಶಾಸಕರು ಅಭಿನಂದನೆ ಸಲ್ಲಿಸಬಹುದು. ಆದರೆ, ಅದರ ಹೆಸರಿನಲ್ಲಿ ಪಕ್ಷದ ಸಾಧನೆಗಳನ್ನು ಬಿಂಬಿಸುವುದು ಸರಿಯಲ್ಲ. ತಾ.ಪಂ. ಸಭಾಂಗಣದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಸರ್ಕಾರಿ ವಾಹನಗಳನ್ನು ಪಕ್ಷದ ಸಭೆಗಳಿಗೆ ಬಳಸಬಾರದು.ಹಾಗೆ ಮಾಡಿದಲ್ಲಿ ನೀತಿಸಂಹಿತೆ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಶಾಸಕರಿಗೆ ಹಾಗೂ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ ಎಂದರು.

ಚುನಾವಣಾಧಿಕಾರಿಯಾಗಿ ಅಧ್ಯಕ್ಷ-ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದ ಬಳಿಕ ಹೊರಬಂದೆ. ಶಾಸಕರು ಭಾಗವಹಿಸಿ ಅಭಿನಂದನಾ ಭಾಷಣ ಮಾಡಿದ್ದು ತಮಗೇನೂ ತಿಳಿಯದು. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳುವುದಾಗಿ ಉಪ ವಿಭಾಗಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.