ಹರಿಹರ: ಪಠ್ಯ ಜ್ಞಾನದ ಜತೆ ಕಾನೂನಿನ ಅರಿವು ಪಡೆಯುವುದು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಸಹಕಾರಿಯಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುಭಾಷ್ ಬಿ. ಹೊಸಕಲ್ಲೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಗರದ ಎಸ್ಜೆವಿಪಿ ಕಾಲೇಜು ವತಿಯಿಂದ ಆಯೋಜಿಸಲಾಗಿರುವ ದಾವಣಗೆರೆ ವಿವಿ ಅಂತರ್ ಕಾಲೇಜು ಮಹಿಳಾ ಎನ್ಎಸ್ಎಸ್ ಶಿಬಿರದಲ್ಲಿ ಸೋಮವಾರ ನಡೆದ ಬಡತನ ನಿರ್ಮೂಲನೆ ಯೋಜನೆಗಳ ಪರಿಣಾಮ ಮತ್ತು ಅನುಷ್ಠಾನ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಭಾರತದ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪಠ್ಯದ ಜತೆ ಕಾನೂನಿನ ಜ್ಞಾನ ಪಡೆಯುವ ಮೂಲಕ ತಮ್ಮ ಹಾಗೂ ದೇಶದ ಭವಿಷ್ಯ ರೂಪಿಸಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಧೀಶೆ ಬಿ. ಸುಮಲತಾ ಮಾತನಾಡಿ, ಮಹಿಳೆ ಪುರುಷನಿಗಿಂತ ಮಾನಸಿಕವಾಗಿ ಹೆಚ್ಚು ಸದೃಢ ಎಂಬುದನ್ನು ಹಲವಾರು ಮಹಿಳೆಯರು ಸಾಧಿಸಿದ್ದಾರೆ. ಆದರೂ, ಸಮಾಜ ಮಹಿಳೆಯರನ್ನು ದೈಹಿಕ, ಮಾನಸಿಕ ಬಲಹೀನಳೆಂದು ಭಾವಿಸಿ, ಈಗಲೂ ಮಹಿಳೆಯರಿಗೆ ಎರಡನೇ ದರ್ಜೆ ಸ್ಥಾನಮಾನ ನೀಡುತ್ತಿರುವುದು ಸಾಮಾಜಿಕ ದುರಂತ. ಎಂದರು.
ಮಹಿಳೆ ಹಾಗೂ ಕಾನೂನು ಕುರಿತು ಉಪನ್ಯಾಸ ನೀಡಿದ ವಕೀಲರಾದ ಜಿ.ಎಚ್. ಭಾಗೀರಥಿ, ಮಹಿಳೆಯರ ಮೇಲಾಗುವ ದೈಹಿಕ, ಮಾನಸಿಕ, ಭಾವನಾತ್ಮಕ, ಲೈಂಗಿಕ ದೌರ್ಜನ್ಯ, ಶೋಷಣೆ ತಡೆಯಲು ರೂಪಿಸಿರುವ ವಿಶೇಷ ಕಾನೂನುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸರ್ವಮಂಗಳಮ್ಮ, ಎಪಿಪಿ ಶಂಷೀರ್ ಅಲಿಖಾನ್, ವಕೀಲ ಎಚ್.ಎಂ. ಷಡಾಕ್ಷರಯ್ಯ ಮಾತನಾಡಿದರು. ಉಪನ್ಯಾಸಕರಾದ ಸೌಭಾಗ್ಯ ಹಿರೇಮಠ, ಹೇಮಲತಾ ಮಠದ್, ಶಿಬಿರಾಧಿಕಾರಿಗಳಾದ ಪ್ರೊ.ಎಚ್.ಎಂ. ವೇದಮೂರ್ತಿ ಆರಾಧ್ಯ, ಡಾ.ಪರಮೇಶ್ವರ ನಾಯ್ಕ, ಬಿ.ಎಂ. ಸದಾಶಿವಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.