ದಾವಣಗೆರೆ: ದುಗ್ಗಮ್ಮನ ದೇಗುಲದ ಬಳಿ ಗುರುವಾರ ಬಿಜೆಪಿ–ಕಾಂಗ್ರೆಸ್ ಮುಖಂಡರ ರೋಡ್ ಷೋ ವೇಳೆ ನಡೆದ ಗಲಾಟೆ ನಂತರ, ಬಿಜೆಪಿ ಕಾರ್ಯಕರ್ತೆ ಗೌರಮ್ಮ ಅವರ ಮನೆ ಮೇಲೆ ದಾಳಿ ನಡೆದಿದೆ.
‘ಮನೆಯಲ್ಲಿದ್ದ ಪೀಠೋಪಕರಣಗಳು, ವಸ್ತುಗಳನ್ನೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒಡೆದು ಹಾಕಿದ್ದಾರೆ. ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾ ಪಿಲ್ಲಿ ಮಾಡಿದ್ದಾರೆ’ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ಆರೋಪಿಸಿದರು.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಎಸ್.ಟಿ. ವೀರೇಶ್, ರಾಜನಹಳ್ಳಿ ಶಿವಕುಮಾರ್, ರುದ್ರಮುನಿ ಸ್ವಾಮಿ, ವೈ. ಮಲ್ಲೇಶ್, ದೇವೀರಮ್ಮ, ಎಚ್.ಸಿ. ಜಯಮ್ಮ, ಎನ್. ರಾಜಶೇಖರ್, ರಾಘವೇಂದ್ರ, ಪ್ರವೀಣ್ ಜಾಧವ್ ಅವರೂ ಬಸವನಗರ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ಬೆನ್ನು ಬಿದ್ದಿದ್ದರು...’
‘‘ಮೂರ್ನಾಲ್ಕು ದಿನಗಳಿಂದ ಬಿಜೆಪಿಯ ಕೆಲ ಕಾರ್ಯಕರ್ತರು ನಾವು ಹೋದಲ್ಲೆಲ್ಲಾ ಹಿಂದೆ ಬಂದು ‘ಮೋದಿ, ಮೋದಿ, ಮೋದಿ...’ ಎಂದು ಕೂಗುತ್ತಿದ್ದರು. ಮೊನ್ನೆ ಕೈದಾಳದಲ್ಲೂ ಹೀಗೆ ಮಾಡಿದಾಗಲೇ ಘರ್ಷಣೆ ಆಗಬೇಕಾಗಿತ್ತು. ಆದರೆ, ಅವರಲ್ಲಿ ಕೆಲವರನ್ನು ಕರೆದು ಹೀಗೆಲ್ಲಾ ಕೂಗಬಾರದು ಎಂದು ಹೇಳಿ ಕಳುಹಿಸಿದ್ದೆವು. ಅಷ್ಟಾದರೂ ಗುರುವಾರ ಮತ್ತೆ ಕೆಲವರು ನಾವು ರೋಡ್ ಷೋ ನಡೆಸುವಾಗ ಘೋಷಣೆ ಕೂಗಿದರು. ಇದರಿಂದ ರೊಚ್ಚಿಗೆದ್ದ ನಮ್ಮ ಕಾರ್ಯಕರ್ತರು ತಿರುಗಿ ಬಿದ್ದರು. ಅವರೆಲ್ಲ ಓಡಿದರು ನೋಡಿ ಅಷ್ಟೇ...’’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.