ಹೊನ್ನಾಳಿ: ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಪ್ರಮಾಣಪತ್ರ ನೀಡುವುದು ಬೇಡ. ಇದಕ್ಕೆ ವಿನಾಯ್ತಿ ನೀಡಲು ಮುಖ್ಯಮಂತ್ರಿ ಜತೆ ಶೀಘ್ರದಲ್ಲೇ ಚರ್ಚಿಸಲಾಗುವುದು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಎದುರು ಸೋಮವಾರ ಪಡಿತರಚೀಟಿ ಮತ್ತು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾದ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಟಿತರಚೀಟಿಗೆ ಆದಾಯ ಪ್ರಮಾಣಪತ್ರ ಕಡ್ಡಾಯ ಮಾಡಿದರೆ ಶೇ 50ರಷ್ಟು ಬಿಪಿಎಲ್ ಕಾರ್ಡ್ದಾರರಿಗೆ ಅನ್ಯಾಯವಾಗಲಿದೆ. ಆದ್ದರಿಂದ, ಬಡವರಿಗೆ ಈ ನಿಯಮದಿಂದ ರಿಯಾಯ್ತಿ ನೀಡಬೇಕು. ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜೀವರಾಜ್ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದರು.
ತಾಕೀತು: ಕೂಲಿ ಮಾಡುವುದನ್ನೇ ಆದಾಯ ಎಂದು ಪರಿಗಣಿಸಬೇಡಿ. ಭಿಕ್ಷೆ ಬೇಡುವವರಿಗೆ, ಮದುವೆಗಳಲ್ಲಿ ಪಾತ್ರೆ ತೊಳೆದು ಬದುಕು ಸಾಗಿಸುವವರಿಗೆ ರೂ. 31 ಸಾವಿರ ಆದಾಯ ಪ್ರಮಾಣಪತ್ರ ನೀಡಿದ್ದೀರಿ. ಸರ್ಕಾರ ಬಡವರು-ನಿರ್ಗತಿಕರಿಗೆ ಮಾಸಾಶನ ನೀಡುತ್ತಿದೆ. ಇದನ್ನು ಆದಾಯಕ್ಕೆ ಸೇರಿಸಕೂಡದು ಎಂದು ತಹಶೀಲ್ದಾರರಿಗೆ ತಾಕೀತು ಮಾಡಿದರು.
ತಾಲ್ಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ `ಮಡಿಲು ಕಿಟ್~ ವಿತರಿಸಲು ಪ್ರತಿ ಫಲಾನುಭವಿಯಿಂದ ್ಙ 200 ಲಂಚ ಕೇಳುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪ ಕೇಳಿ ಕೆಂಡಾಮಂಡಲರಾದ ರೇಣುಕಾಚಾರ್ಯ, ಸ್ಥಳಕ್ಕೆ ತಾಲ್ಲೂಕು ವೈದ್ಯಾಧಿಕಾರಿಯನ್ನು ಕರೆಸಿ ಸೂಕ್ತ ತನಿಖೆಗೆ ಆದೇಶಿಸಿದರು. ಎಲ್ಲಾ ವೈದ್ಯರು ಕೇಂದ್ರಸ್ಥಾನದಲ್ಲಿರಬೇಕು ಎಂದು ಸೂಚಿಸಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಫರ್ಜಾನಾ ಬಾನು, ಉಪಾಧ್ಯಕ್ಷೆ ಸುಶೀಲಮ್ಮ ದುರುಗಪ್ಪ, ಸದಸ್ಯರಾದ ಎನ್. ಜಯರಾವ್, ಕೆ. ನಿಂಗಪ್ಪ, ಪರಮೇಶ್ವರಪ್ಪ ಪಟ್ಟಣಶೆಟ್ಟಿ, ಚಾಟಿ ಶೇಖರಪ್ಪ, ಮಲ್ಲೇಶಪ್ಪ, ಅಣ್ಣಪ್ಪ, ರೇವಣಸಿದ್ದಪ್ಪ, ಶಾಂತರಾಜ್ ಪಾಟೀಲ್, ಧರ್ಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.