ಮಲೇಬೆನ್ನೂರು: ಪಟ್ಟಣದ ಸುತ್ತಮುತ್ತ ಭಾನುವಾರ ತಡ ರಾತ್ರಿ ಕೋಲ್ಮಿಂಚು, ಗುಡುಗು ಸಿಡಿಲು ಬಿರುಗಾಳಿ ಆಲಿಕಲ್ಲು ಸಹಿತ ಬಿರುಮಳೆ ಸುರಿಯಿತು.
ಕಳೆದ ಕೆಲವು ದಿನಗಳಿಂದ ವಾತಾವರಣದ ಉಷ್ಣಾಂಶ ಹೆಚ್ಚಾಗಿ ಬಿಸಿಗಾಳಿ ಬೀಸಿ ನಾಗರಿಕರು ಧಗೆಯಿಂದ ಕಂಗಾಲಾಗಿದ್ದರು.
ಬಿರುಮಳೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಕಾರಣ ವಾತಾವರಣ ತಂಪಾಯಿತು.ಮೋರಿಗಳು ಸ್ವಚ್ಛವಾದವು.
ಕಾಳುಕಟ್ಟಿ ಅರೆಬರೆ ಒಣಗಿದ್ದ ಭತ್ತದ ಬೆಳೆ ಗಾಳಿಹೊಡೆತಕ್ಕೆ ಸಿಲುಕಿ ಚಾಪೆ ಹಾಸಿದೆ. ಕಷ್ಟಪಟ್ಟು ಬೆಳೆದ ಭತ್ತ ಕಟಾವಿನ ವೇಳೆ ನೆಲದ ಪಾಲಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ನೀರಿನ ಕೊರತೆ ಅನುಭವಿಸುತ್ತಿದ್ದ ತಡವಾಗಿ ಹಚ್ಚಿದ ಭತ್ತದ ಬೆಳೆ ಹಾಗೂ ಅಡಿಕೆ ತೆಂಗಿನ ತೋಟಕ್ಕೆ ಮಳೆ ಸುರಿದಿರುವುದು ಅನುಕೂಲವಾಗಿದೆ ಎಂದು ರೈತರು ತಿಳಿಸಿದರು.
ಪಟ್ಟಣದ ಬಸವೇಶ್ವರ ಬಡಾವಣೆಯ ಮನೆಯ ಚಾವಣಿಗೆ ಹೊದಿಸಿದ್ದ ಜಿಐ ಶೀಟ್ಗಳು ಹಾರಿ ಬಿದ್ದು ವಿದ್ಯುತ್ ಕಂಬ ಮುರಿದುಬಿದ್ದಿದೆ.
ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿದ್ಯುತ್ ಪೂರೈಸುವ ಕಂಬಗಳಿಗೆ ಹಾನಿಯಾಗಿದ್ದು, ಸೋಮವಾರ ಬೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.