ADVERTISEMENT

ಭಾವೈಕ್ಯ ಬೆಸೆಯುವ ಊರಮ್ಮದೇವಿ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:25 IST
Last Updated 2 ಫೆಬ್ರುವರಿ 2011, 7:25 IST

ಹರಪನಹಳ್ಳಿ: ತಾಲ್ಲೂಕಿನ ಚಿಗಟೇರಿಯಲ್ಲಿ ಈಚೆಗೆ ಶಿಷ್ಟ ಗ್ರಾಮದ ಅದಿದೇವತೆ ಊರಮ್ಮದೇವಿಯ ಉತ್ಸವಕ್ಕೆ  ಚಾಲನೆ ನೀಡಲಾಯಿತು ಅನೇಕ ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೇವತೆಯ ಉತ್ಸವನ್ನು ಅತ್ಯಂತ ವೈಭವದಿಂದ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಗ್ರಾಮದಲ್ಲಿ ಆಗಾಗ್ಗೆ ನಡೆಯುವ ಅಹಿತಕರ ಘಟನೆಗಳು, ಬಿಟ್ಟುಬಿಡದೇ ಕಾಡುತ್ತಿರುವ ‘ನೆರೆ’ಇಲ್ಲವೇ ‘ಬರ’ದಂತಹ ಭೀಕರ ಪ್ರಕೃತಿ ವಿಕೋಪಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು.ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಊರಲ್ಲಿ ನೆಲೆಸಿರುವ ಸರ್ವ ಜನಾಂಗದವರಲ್ಲಿಯೂ ಭಾತೃತ್ವ, ಸಹೋದರತ್ವದ ಬಾಂಧವ್ಯ ಬೆಸೆದು ‘ಭಾವೈಕ್ಯತೆ’ಗೆ ನಾಂದಿ ಹಾಡಲು ದೇವಿಯ ಉತ್ಸವನ್ನು ಅತ್ಯಂತ ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಉತ್ಸವ ಸಮಿತಿ ಅಧ್ಯಕ್ಷ ಡಾ.ಮಂಜುನಾಥ ಉತ್ತಂಗಿ ಹಾಗೂ ಉಪಾಧ್ಯಕ್ಷ ಶಾಂತನಗೌಡ.

ಜ. 28ರಿಂದಲೇ ವಿದ್ಯುಕ್ತವಾಗಿ ದೇವಿಯ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಫೆ. 4ಕ್ಕೆ ಉತ್ಸವ ಧಾರ್ಮಿಕ ವಿಧಿ ಮಂಗಳವಾಗುವುದು. ಎಲ್ಲಾ ಧಾರ್ಮಿಕ ಕಾರ್ಯಗಳು ಪಕ್ಕದ ಮತ್ತಿಹಳ್ಳಿ ಗ್ರಾಮದ ದೈವಸ್ತರ ಮುಂದಾಳತ್ವದಲ್ಲಿ ನಡೆಯುತ್ತಿರುವುದು ವಿಶೇಷ.

ಪದ್ಧತಿಯಂತೆ ಉತ್ಸವ ಮೂರನೇ ದಿನವಾದ ಮಂಗಳವಾರ ಕುಂಬಾರ ಮನೆಯಿಂದ ಪೂಜಾ ಸಾಮಗ್ರಿಗಳೊಂದಿಗೆ ಒಲೆಪೂಜೆ, ನಂತರ ಗ್ರಾಮದಲ್ಲಿ ನೆಲೆಯೂರಿರುವ ಪ್ರತಿ ದೇವಸ್ಥಾನಕ್ಕೂ ಅಕ್ಕಿಪಡಿ ಕೊಟ್ಟು ಪೂಜೆ ಕಾರ್ಯ ಸಲ್ಲಿಸಲಾಯಿತು. ನಂತರ ಸಂಜೆ ಮಿಥುನದ ಊಟ ಹಾಗೂ ಕುರುಬರಹಟ್ಟಿಯ ಬಣಕಾರ ಮನೆಯಿಂದ ದೇವಿಯ ಹುಲುಸಿನ ಪಡುಗ ತರಲಾಯಿತು. ಘಟ್ಟಿ ಕೂಡಿಸಿದ ಮನೆಯಿಂದ ಘಟ್ಟಿಗಳನ್ನು ಚೌಕಮನೆ ಕಟ್ಟೆಗೆ ತರಲಾಯಿತು. ನಂತರ ಚೌಕಿಕಟ್ಟೆಯ ಬಳಿ ದೀಪ ಬೆಳಗಿಸಲಾಯಿತುಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ‘ಮೊಳಗು’ ಮಹಿಳಾ ಕಲಾ ತಂಡದ ಆಕರ್ಷಕ ಡೊಳ್ಳುಕುಣಿತ ನೆರೆದ ಜನ ಮನಸೂರೆಗೊಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.