ADVERTISEMENT

ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:10 IST
Last Updated 16 ಫೆಬ್ರುವರಿ 2011, 10:10 IST

ದಾವಣಗೆರೆ: ಕಂದಾಯ ಇಲಾಖೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಿಂದ ಕೃಷಿ ಕಾರ್ಮಿಕರು, ರೈತರು ತೊಂದರೆಗೀಡಾಗಿದ್ದಾರೆ. ಇದರ ವಿರುದ್ಧ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಕಬ್ಬೂರು ಗ್ರಾಮದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಜಿ. ಏಕಾಂತಪ್ಪ ತಿಳಿಸಿದರು.ಪೌತಿ ಮತ್ತು ಪಾಲು ವಿಭಾಗ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅದು ಸರಿಯಲ್ಲ. ಬೆಳೆ ವಿಕ್ರಯ, ಸಣ್ಣಪುಟ್ಟ ಕಾರಣಗಳಿಗೂ ಸ್ಕೆಚ್ ಕಾಪಿ ಕೇಳಲಾಗುತ್ತಿದೆ. ಅದಕ್ಕಾಗಿ ಗ್ರಾಮೀಣ ರೈತರು ಕಂದಾಯ ಇಲಾಖೆಯ ಕಚೇರಿಗಳಿಗೆ ಹಲವಾರು ಬಾರಿ ಓಡಾಡಬೇಕಾಗುತ್ತದೆ. ಅಲ್ಲದೇ, ಎಲ್ಲ ದಾಖಲೆ ಪಡೆಯಲು ಸಾವಿರಾರು ರೂ ಲಂಚ ಪಾವತಿಸಬೇಕಾಗುತ್ತದೆ. ಇದರ ವಿರುದ್ಧ ತಾವು ಹೋರಾಟ ಕೈಗೊಳ್ಳುವುದಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪೌತಿ ಮತ್ತು ಪಾಲು ವಿಭಾಗ ನಾಡ ಕಚೇರಿಯಲ್ಲೇ ಆಗಬೇಕು. ಸರ್ವೇ ಕಚೇರಿಯಲ್ಲಿ ಭ್ರಷ್ಟಾಚಾರ ತೊಲಗಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಫೆ. 21ರಿಂದ ನಗರದ ತಾಲ್ಲೂಕು ಕಚೇರಿ ಮುಂಭಾಗ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿ.ವಿ. ವಿಜಯಮೂರ್ತಿ, ಖಲೀಲ್ ಸಾಬ್, ಗುಡ್ಡದ ಕಲ್ಲಪ್ಪ, ರಾಜಶೇಖರಪ್ಪ ಸಿದ್ದಪ್ಪ ಇದ್ದರು.

25ಕ್ಕೆ ‘ಬೆಂಗಳೂರು ಚಲೋ’
ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ವತಿಯಿಂದ ಫೆ. 25ರಂದು ‘ಬೆಂಗಳೂರು ಚಲೋ’ ರಾಜ್ಯಮಟ್ಟದ ಮಹಾರ್ಯಾಲಿ ನಡೆಯಲಿದೆ.ದಲಿತರಿಗೆ ಸಮಾನತೆಯ ಹಕ್ಕು, ಶಿಕ್ಷಣ ಸಂಪತ್ತು ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಒತ್ತಾಯಿಸಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ/ ವರ್ಗಗಳ ಅಭಿವೃದ್ಧಿಗಾಗಿ ಶೇ. 23ರಷ್ಟು ಹಣವನ್ನು ಏಕಗವಾಕ್ಷಿ ಮೂಲಕ ಜಾರಿಗೊಳಿಸಬೇಕು. ಎಂಬುದೂ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಭದ್ರಾವತಿ ಸತ್ಯ, ರಾಜ್ಯ ಸಂಘಟನಾ ಸಂಚಾಲಕರಾದ ಡಿ.ಆರ್. ಪಾಂಡುರಂಗಸ್ವಾಮಿ, ಆಲೂರು ಲಿಂಗರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.