ADVERTISEMENT

ಮಠಕ್ಕೆ ಹಣ ಮುಖ್ಯವಲ್ಲ, ಭಕ್ತರು ಮುಖ್ಯ

ಚನ್ನಗಿರಿ: ಉಮಾಮಹೇಶ್ವರ ಸ್ವಾಮಿ ಜಾತ್ರಾ ಉತ್ಸವದಲ್ಲಿ ಶಾಸಕ ವಡ್ನಾಳ್‌ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2013, 5:15 IST
Last Updated 25 ಡಿಸೆಂಬರ್ 2013, 5:15 IST

ಚನ್ನಗಿರಿ: ‘ಮಠಮಾನ್ಯಗಳು ಇರುವುದರಿಂದ ಭಕ್ತರಿಗೆ ಉತ್ತಮ ಮಾರ್ಗದರ್ಶನ ಹಾಗೂ ಒಳ್ಳೆಯ ದಾರಿ ಸಿಗುತ್ತಿದೆ. ಯಾವುದೇ ಮಠಮಾನ್ಯಗಳಿಗೆ ಹಣಕ್ಕಿಂತ ಭಕ್ತರು ಮುಖ್ಯವಾಗಿರುತ್ತಾರೆ’ ಎಂದು ಶಾಸಕ ವಡ್ನಾಳ್‌ ರಾಜಣ್ಣ ಹೇಳಿದರು.

ತಾಲ್ಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಸೋಮವಾರ ನಡೆದ ಉಮಾಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ- ಹರಿದಿನಗಳನ್ನು ಇನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕೇವಲ ಫ್ಯಾಷನ್‌ಗೋಸ್ಕರ ಆಚರಿಸುತ್ತಾರೆ ಎಂದರು.  ಇದೇ ಸಮಯದಲ್ಲಿ ಅವರು, ವೀರಭದ್ರೇಶ್ವರ ಸಮುದಾಯ ಭನವ ನಿರ್ಮಾಣಕ್ಕೆ ₨ 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹೇಶ್ವರ ಜಾತ್ರೆಯನ್ನು ಎಲ್ಲಾ ಕಡೆ ಆಚರಿಸುತ್ತಾರೆ. ಆದರೆ, ಉಮಾಮಹೇಶ್ವರ ಸ್ವಾಮಿ ಜಾತ್ರೆಯನ್ನು ಈ ಮಠದಲ್ಲಿ ಮಾತ್ರ ಆಚರಿಸಲಾಗುತ್ತಿದೆ.  ಈ ಮಠಕ್ಕೆ  ಸರ್ಕಾರ ಈ ತನಕ ಒಂದು ರೂಪಾಯಿ ಅನುದಾನವನ್ನು ನೀಡಿಲ್ಲ. ಕೇವಲ ಭಕ್ತರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ವೀರಭದ್ರೇಶ್ವರ ಸಮುದಾಯ ಭವನ ನಿರ್ಮಿಸಲು ತೀರ್ಮಾನಿಸಿದ್ದು, ಜೋಳಿಗೆ ಹಿಡಿದು ಭಕ್ತರಿಂದ ಹಣ ಸಂಗ್ರಹಿಸಲಾಗುವುದು ಎಂದರು.

ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜದೇಶಿಕೇಂದ್ರ ಸ್ವಾಮೀಜಿ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಬಿ. ಮೃತ್ಯುಂಜಯಪ್ಪ, ಸಿ.ಎಂ. ನಾಗೇಶ್‌, ಎಚ್‌.ವಿ. ಶಿವಮೂರ್ತಿ, ಮಲ್ಲಿಕಾರ್ಜುನಸ್ವಾಮಿ, ಸಿ.ಎಸ್‌. ವಿರೂಪಾಕ್ಷಪ್ಪ, ಶೀಲವಂತರ ಓಂಕಾರಮೂರ್ತಿ, ಪುಟ್ಟಪ್ಪ ಉಪಸ್ಥಿತರಿದ್ದರು.

ಟಿ.ಎಸ್‌. ರಮೇಶ್‌ ಸ್ವಾಗತಿಸಿದರು. ಡಾ. ಜಗದೀಶ್‌ ವಂದಿಸಿದರು. ಅನಿತಾ ಓಂಕಾರಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT