ADVERTISEMENT

ಮುಕ್ತಾಯದತ್ತ ಕೆರೆ ಅಭಿವೃದ್ಧಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 4:55 IST
Last Updated 19 ಫೆಬ್ರುವರಿ 2012, 4:55 IST

ಆಧುನಿಕ ತಂತ್ರಜ್ಞಾನ ಬಳಸಿ ಮಾಯಕೊಂಡ ಸಮೀಪದ ಕೊಡಗನೂರು ಕೆರೆ ದುರಸ್ತಿ ಕಾರ್ಯ ಗೊಳ್ಳಲಾಗಿದ್ದು, ಇದೀಗ  ಮುಕ್ತಾಯ ಹಂತದದಲ್ಲಿದೆ.

ಕಳೆದ ವರ್ಷ ಸುರಿದ ಭಾರೀ ಮಳೆಗೆ ಏರಿ ಕುಸಿದು ಅಕ್ಕಪಕ್ಕದ ಗ್ರಾಮಗಳಿಗೆ ಮುಳುಗಡೆಯ ಭೀತಿ ಮೂಡಿಸಿದ್ದಲ್ಲದೇ ಸಂಚಾರ ಅವ್ಯವಸ್ಥೆಯಾಗಿ ಈ ಮಾರ್ಗದ ಪ್ರಯಾಣಿಕರ ಬವಣೆಗೂ ಕಾರಣವಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ರವಿಂದ್ರನಾಥ್ ಮತ್ತು  ಶಾಸಕ ಬಸವರಾಜ ನಾಯ್ಕ ಅವರ ಆಸಕ್ತಿ ಮತ್ತು ಒತ್ತಡದಿಂದ ್ಙ 2.65 ಕೋಟಿ ವೆಚ್ಚದ ಕೆರೆ ಏರಿ ದುರಸ್ತಿ ಕಾರ್ಯ ಆರಂಭಗೊಂಡಿತು. ಇದೀಗ ಏರಿ ನಿರ್ಮಾಣ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.

ಕೆರೆ ಸುಮಾರು 500 ಎಕರೆ ವಿಸ್ತೀರ್ಣ ಹೊಂದಿದ್ದು, ಸುಮಾರು 1.25 ಕಿ.ಮೀ ಉದ್ದದ ಏರಿ ಹೊಂದಿದೆ. ಏರಿಯ ಮೇಲೆ ಮಂಡ್ಯ ಮತ್ತು ಹೂವಿನ ಹಡಗಲಿ ಕೂಡಿಸುವ ರಾಜ್ಯ ಹೆದ್ದಾರಿ ಹಾದು ಹೋಗಿದೆ.
ಕುಸಿದು ಅಪಾಯಕ್ಕೀಡಾದ 100 ಮೀ. ಏರಿಯನ್ನು ಆಧುನಿಕ ವಿಧಾನಗಳಾದ ಟೋಡ್ರೈನ್, ಯುಕೊಡ್ರೈನ್ ಮತ್ತು ಇನ್‌ಕ್ಲೈಂಡ್ ಫಿಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಏರಿಯುದ್ದಕ್ಕೂ ಟೋಡ್ರೈನ್ ಮತ್ತು 8ಇನ್‌ಕ್ಲೈಂಡ್ ಫಿಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಫಿಲ್ಟರ್ ಮೀಡಿಯಾಗಳನ್ನು ನಿರ್ಮಿಸಲಾಗಿದೆ.

ಏರಿ ನಿರ್ಮಾಣ ತಳಭಾಗದಲ್ಲಿ 100 ಮೀ. ಇದ್ದು ಮೇಲ್ಭಾಗದಲ್ಲಿ 160 ಮೀ. ಬರುವಂತೆ ನಿರ್ಮಿಸಲಾಗಿದೆ. 5 ಮೀ. ತಳಭಾಗದಿಂದ ಜೇಡಿ ಮಣ್ಣು ತುಂಬಿ ನೆಲಮಟ್ಟದಿಂದ ಸುಮಾರು 30 ಅಡಿ ಎತ್ತರದ ನಿರ್ಮಾಣ ಮಾಡಲಾಗಿದೆ. ಏರಿಯ ತಳಭಾಗದ ಅಗಲ ಸುಮಾರು 90ಅಡಿ ಇದ್ದು, ಮೇಲ್ಭಾಗದ ಅಗಲ  50 ಅಡಿ ಇದೆ. ಮಧ್ಯದಲ್ಲಿ ಕಪ್ಪು ಮಣ್ಣು ಮತ್ತು ಎರಡೂ ಪಕ್ಕಗಳಲ್ಲಿ ಗ್ರಾವೆಲ್ ಹಾಕುತ್ತಾ ಏರಿಯನ್ನು ನಿರ್ಮಿಸಲಾಗಿದೆ.

ಇನ್ನು ಕೇವಲ ರಿವಿಟ್ಮೆಂಟ್ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಗುಣಮಟ್ಟದ ಕಾಮಾರಿಯನ್ನು ನಿರ್ವಹಿಸಲು ಕ್ರಮಕೈಗೊಂಡಿದ್ದೇವೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ತಿಪ್ಪೇಸ್ವಾಮಿ.

ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ. ಕ್ಷೇತ್ರದ ಅತ್ಯಂತ ದೊಡ್ಡ ಕೆರೆ ಕೊಡಗನೂರು ಕೆರೆ ಏರಿ ದುರಸ್ತಿ ನಮ್ಮ ಆದ್ಯತೆಯ ಕಾರ್ಯವಾಗಿತ್ತು. ಶೀಘ್ರದಲ್ಲಿ ತರಳಬಾಳು ಶ್ರೀಗಳಿಂದ ಏರಿಯನ್ನು ಉದ್ಘಾಟಿಸಲು ಉತ್ಸುಕನಾಗಿದ್ದೇನೆ ಎನ್ನುತ್ತಾರೆ ಶಾಸಕ ಬಸವರಾಜ ನಾಯ್ಕ.

ಕೆರೆಯಲ್ಲಿನ ಹೂಳನ್ನು ರೈತರು ಸ್ವತಃ ಹೊಲಗಳಿಗೆ ಸಾಗಿಸುತ್ತಿದ್ದಾರೆ  ಇದರಿಂದ ಮುಂದಿನ ವರ್ಷ ಕೆರೆಯ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚುತ್ತಿದೆ. ಇಂಥ ವೇಳೆಗೆ ಸರಿಯಾಗಿ  ಶೀಘ್ರ ಏರಿ  ನಿರ್ಮಾಣ ಮುಕ್ತಾಯಗೊಂಡಿದ್ದು, ತುಂಬಾ ಉಪಯುಕ್ತ ಎನ್ನುತ್ತಾರೆ ಕೊಡಗನೂರು ಗ್ರಾಮದ ರೈತ ಮಂಜುನಾಥ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.