ADVERTISEMENT

ರಾಜ್ಯಮಟ್ಟದ ಕಬಡ್ಡಿ ಟೂರ್ನಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:15 IST
Last Updated 14 ಅಕ್ಟೋಬರ್ 2011, 8:15 IST

ದಾವಣಗೆರೆ: ಬಹುವರ್ಷಗಳ ನಂತರ ನಗರದಲ್ಲಿ ರಾಜ್ಯಮಟ್ಟದ ಹೊನಲು-ಬೆಳಕಿನ ಪುರುಷರ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ ಎಂದು ಶ್ರೀಗುರು ದ್ರೋಣಾ ಕ್ರೀಡಾ ಸಮಿತಿ ಅಧ್ಯಕ್ಷ ಆರ್. ಲಕ್ಷ್ಮಣ್ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಬಡ್ಡಿ ಟೂರ್ನಿ ಅ. 21ರಿಂದ 23ರವರೆಗೆ ನಗರದ ಲೇಬರ್ ಕಾಲೊನಿಯ ನಾಟ್ಯಚಾರ್ಯ ಕುಲಕರ್ಣಿ ರಂಗಮಂದಿರದ ಆವರಣದಲ್ಲಿ ನಡೆಸಲಾಗುತ್ತಿದ್ದು, ಅದಕ್ಕಾಗಿ ಎರಡು ಕಡೆ ಅಂಕಣ ಸಿದ್ಧತೆ ಚುರುಕಿನಿಂದ ನಡೆಯುತ್ತಿದೆ ಎಂದು ಅವರು ಹೇಳಿದರು.

ಟೂರ್ನಿಗೆ ಬೆಂಗಳೂರಿನಿಂದಲೇ ರಾಷ್ಟ್ರೀಯ ಆಟಗಾರರನ್ನು ಒಳಗೊಂಡಿರುವ 20 ಕಬಡ್ಡಿ ತಂಡಗಳು ಹಾಗೂ ಧಾರವಾಡದ `ಸಾಯಿ~ ತಂಡ, ಮಂಗಳೂರಿನ `ಆಳ್ವಾಸ್~ ತಂಡ ಹಾಗೂ ಹಾವೇರಿ, ಚಿತ್ರದುರ್ಗ, ಬೆಳಗಾವಿ, ಹುಲಿಕೋಟೆ, ಚನ್ನರಾಯಪಟ್ಟಣಗಳಿಂದ ಟೂರ್ನಿ ಯಲ್ಲಿ ಒಟ್ಟು 40 ಕಬಡ್ಡಿ ತಂಡಗಳು ಸ್ಪರ್ಧಿಸುತ್ತಿವೆ. ಆಟಗಾರರಿಗೆ ವಸತಿ-ಊಟ ಕಲ್ಪಿಸಲಾಗಿದ್ದು, ಒಂದು ಕಡೆಯ ಸಾರಿಗೆ ವೆಚ್ಚ ಭರಿಸಲಾಗುತ್ತಿದೆ ಎಂದು ವಿವರಿಸಿದರು.

ವರ್ಷದ ಹಿಂದೆ ಶಾಮನೂರಿನಲ್ಲಿ ಮಯೂರ ಕ್ರೀಡಾ ಸಮಿತಿ ವತಿಯಿಂದ ರಾಜ್ಯಮಟ್ಟದ ಕಬಡ್ಡಿ ಟೂರ್ನಿ ಆಯೋಜಿಸಿದ್ದು ಹೊರತುಪಡಿಸಿದರೆ, ನಗರದಲ್ಲಿ ರಾಜ್ಯಮಟ್ಟದ ಟೂರ್ನಿ ನಡೆದು 10 ವರ್ಷಗಳೇ ಕಳೆದಿವೆ. ಸದ್ಯ ನಡೆಯುತ್ತಿರುವ ರಾಜ್ಯಮಟ್ಟದ ಕಬಡ್ಡಿ ಟೂರ್ನಿ ನಗರದ ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಸಿ. ಲೋಕೇಶ್, ಕರಿಬಸಪ್ಪ, ಸೈಯದ್ ಮನ್ಸೂರ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.