ADVERTISEMENT

ರಾಷ್ಟ್ರ ವಿರೋಧಿ ಹುನ್ನಾರಕ್ಕೆ ಕುಮ್ಮಕ್ಕು ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 10:35 IST
Last Updated 7 ಜುಲೈ 2012, 10:35 IST

ಹೊನ್ನಾಳಿ: ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸುವ ರಾಷ್ಟ್ರ ವಿರೋಧಿಗಳ ಹುನ್ನಾರಕ್ಕೆ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರಗಳು ಸಹಕರಿಸುತ್ತಿವೆ ಎಂದು ತಾಲ್ಲೂಕು ಆರ್‌ಎಸ್‌ಎಸ್ ಸಂಪರ್ಕ ಪ್ರಮುಖ್ ಶ್ರೀನಿವಾಸ್ ಆರೋಪಿಸಿದರು.

ಜಮ್ಮು-ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಬಾರದು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ `ಜಮ್ಮು-ಕಾಶ್ಮೀರ ಉಳಿಸಿ~ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾಶ್ಮೀರ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯ 2010ರ ಅಕ್ಟೋಬರ್‌ನಲ್ಲಿ ಪತ್ರಕರ್ತ ದಿಲೀಪ್ ಪಡಗಾಂವ್‌ಕರ್, ಪ್ರೊ.ರಾಧಾ ಕುಮಾರ್, ಎಂ.ಎಂ. ಅನ್ಸಾರಿ ಎಂಬ ಮೂವರು ಸಂವಾದಕಾರರ ತಂಡ ರಚಿಸಿತು. ಈ ತಂಡ 2011ರ ಅಕ್ಟೋಬರ್ 12ರಂದು ಕೇಂದ್ರಕ್ಕೆ ವರದಿ ಸಲ್ಲಿಸಿತು.

ಆದರೆ, 7 ತಿಂಗಳ ಕಾಲ ವರದಿಯನ್ನು ಗೌಪ್ಯವಾಗಿ ಇರಿಸಿಕೊಂಡ ಕೇಂದ್ರ ಸರ್ಕಾರ, 2012ರ ಮೇ 24ರಂದು ವರದಿಯನ್ನು ಸಾರ್ವಜನಿಕರ ಮುಂದಿಟ್ಟಿತು. ವರದಿಯಲ್ಲಿ ದೇಶದ ಏಕತೆ, ಅಖಂಡತೆ, ಸಾರ್ವಭೌಮತೆಗೆ ಧಕ್ಕೆಯಾಗುವಂತಹ ಅಂಶಗಳಿರುವುದು ಮೇಲ್ನೋಟಕ್ಕೇ ಕಂಡುಬರುತ್ತಿದ್ದು, ಮೂಲಭೂತವಾದಿಗಳ- ಪ್ರತ್ಯೇಕವಾದಿಗಳ ಬೇಡಿಕೆಗೆ ಸರ್ಕಾರ ಅಧಿಕೃತ ಮುದ್ರೆಯೊತ್ತಲು ಹೊರಟಿದೆ ಎಂದು ಟೀಕಿಸಿದರು.

ವರದಿಯನ್ನು ಕೇಂದ್ರ ತಿರಸ್ಕರಿಸಬೇಕು ಹಾಗೂ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಮತ್ತು ಸಿಖ್ಖರಿಗೆ ರಕ್ಷಣೆ ನೀಡಬೇಕು ಎಂದೂ ಅವರು ಒತ್ತಾಯಿಸಿದರು.

ಆರ್‌ಎಸ್‌ಎಸ್ ಮುಖಂಡ ಎಚ್.ಎಂ. ಅರುಣ್‌ಕುಮಾರ್ ಮಾತನಾಡಿ, ಜಮ್ಮು-ಕಾಶ್ಮೀರ ಕಬಳಿಸಲು ಮತ್ತು ಭಾರತದ ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡುವ ದುಷ್ಕೃತ್ಯ ನಡೆಸುತ್ತಿರುವ ಪಾಕಿಸ್ತಾನಕ್ಕೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ವರದಿ ವಿರೋಧಿಸಿ ಶಿರಸ್ತೇದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರವೀಣ್ ಪಟೇಲ್, ಮಂಜುನಾಥ್, ವಸಂತ್, ಜಯಪ್ಪ, ಮಂಜು, ಸಿದ್ದು, ವಿದ್ಯಾರ್ಥಿ ಮುಖಂಡರಾದ ಪ್ರಿಯದರ್ಶಿನಿ, ರಂಜಿತಾ, ಜ್ಯೋತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.