ADVERTISEMENT

ರೈಲ್ವೆ ಬಜೆಟ್: ರಾಜ್ಯದ ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:00 IST
Last Updated 11 ಫೆಬ್ರುವರಿ 2011, 7:00 IST

ದಾವಣಗೆರೆ: ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಬಹಳ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ರಾಜ್ಯದ ರೈಲ್ವೆ ಸಂಬಂಧಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಒತ್ತಾಯಿಸಿದರು.

ಹರಿಹರದಿಂದ ಬೆಂಗಳೂರಿಗೆ ಬೆಳಿಗ್ಗೆ 10ಕ್ಕೆ ತಲುಪುವಂತೆ ಹೊಸ ಇಂಟರ್‌ಸಿಟಿ ರೈಲು ಮಂಜೂರು ಮಾಡಬೇಕು. ದಾವಣಗೆರೆಯಲ್ಲಿ ರೈಲ್ವೆ ವಿಭಾಗೀಯ ಕಾರ್ಯಾಲಯ ಸ್ಥಾಪಿಸಬೇಕು. ಹರಿಹರದಿಂದ ಕಾಶಿ, ಶಬರಿಮಲೆಗೆ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮಂಗಳೂರಿನಿಂದ ಅರಸೀಕೆರೆ, ಚಿಕ್ಕಜಾಜೂರು, ಚಳ್ಳಕೆರೆ, ಗುಂತಕಲ್ ಮಾರ್ಗದ ಮೂಲಕ ಹೈದರಾಬಾದ್‌ಗೆ ರೈಲು ಮಂಜೂರು ಮಾಡಬೇಕು. ಕರ್ನಾಟಕ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಬದಲಿಸಿ ಅರಸೀಕೆರೆ, ಚಿಕ್ಕಜಾಜೂರು, ಚಳ್ಳಕೆರೆ, ಗುಂತಕಲ್, ಸೊಲ್ಲಾಪುರ ಮಾರ್ಗದ ಮೂಲಕ ನವದೆಹಲಿ ತಲುಪುವಂತೆ ಪ್ರತಿದಿನ ರೈಲು ಓಡಿಸಬೇಕು.

ಮೈಸೂರಿನಿಂದ ಬೆಂಗಳೂರಿಗೆ ಇನ್ನೊಂದು ಇಂಟರ್‌ಸಿಟಿ ರೈಲನ್ನು ಓಡಿಸಬೇಕು. ಹರಿಹರ-ಕೊಟ್ಟೂರು ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳನ್ನು ಓಡಿಸಬೇಕು. ಚಿಕ್ಕಜಾಜೂರು- ಸಂತೇಬೆನ್ನೂರು -ದೇವರಹಳ್ಳಿ -ಚನ್ನಗಿರಿ- ಹೊನ್ನಾಳಿ ಮೂಲಕ ಶಿವಮೊಗ್ಗ ತಲುಪುವಂತೆ ನೂತನ ಮಾರ್ಗ ಸಮೀಕ್ಷೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರವಾರ-ಅಂಕೋಲ - ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಕಾಮಗಾರಿ ಅನುಷ್ಠಾನಗೊಳಿಸಬೇಕು. ಹುಬ್ಬಳ್ಳಿ - ಬೆಂಗಳೂರು ಜನ ಶತಾಬ್ದಿ ರೈಲಿಗೆ ಹೆಚ್ಚಿನ 8 ಬೋಗಿ ಅಳವಡಿಸಬೇಕು.ದಾವಣಗೆರೆ ನಗರದ ಅಶೋಕ ಚಿತ್ರಮಂದಿರದ ಬಳಿ ಲೆವೆಲ್ ಕ್ರಾಸಿಂಗ್ ಬಳಿ ಮೇಲು ಸೇತುವೆ ನಿರ್ಮಿಸಬೇಕು. ಗೂಡ್ಸ್ ಶೆಡ್ ಸ್ಥಳಾಂತರವಾಗಿರುವುದರಿಂದ ದಾವಣಗೆರೆ ರೈಲು ನಿಲ್ದಾಣದ ಉತ್ತರ ಭಾಗದಲ್ಲಿ ಉದ್ದವಾದ ಫ್ಲ್ಯಾಟ್‌ಫಾರಂ ನಿರ್ಮಿಸಬೇಕು. ಅಲ್ಲಿ ಟಿಕೆಟ್ ಕೌಂಟರ್ ಆರಂಭಿಸಬೇಕು. ನಿಲ್ದಾಣದಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಿಸಬೇಕು. ಹುಚ್ಚವ್ವನಹಳ್ಳಿಯಲ್ಲಿ ಪ್ಲಾಟ್‌ಫಾರಂ ನಿರ್ಮಿಸಬೇಕು ಎಂದು ಹೇಳಿದರು.

ಭಾರತೀಯ ರೈಲ್ವೆ ್ಙ 25 ಸಾವಿರ ಕೋಟಿ ಲಾಭದಲ್ಲಿದೆ ಎಂದು ಸಂಸತ್‌ನಲ್ಲಿ ಸುಳ್ಳು ಹೇಳಿಕೆ ನೀಡಿದ ರೈಲ್ವೆ ಇಲಾಖೆಯ ಮಾಜಿ ಸಚಿವ ಲಾಲೂಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉದಯಪ್ರಕಾಶ್, ಎಂ.ಎಸ್. ಗೌಸ್, ಡಿ. ಅಸ್ಲಾಂಖಾನ್, ಅಸ್ಗರ್ ಅಹಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.