ADVERTISEMENT

ಲಾರಿ ಪಲ್ಟಿ: ಚಾಲಕ, ಕ್ಲೀನರ್‌ ಪಾರು

ಡಿಕ್ಕಿ ರಭಸಕ್ಕೆ ಕಿತ್ತು ಹೋದ ಎನ್‌ಎಚ್‌–4 ನಾಮಫಲಕ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 5:28 IST
Last Updated 18 ಮಾರ್ಚ್ 2014, 5:28 IST

ದಾವಣಗೆರೆ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ಔಷಧಿ ಪುಡಿ ತುಂಬಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಸೋಮವಾರ ನಡೆದಿದೆ.

ಘಟನೆಯಲ್ಲಿ ಲಾರಿ ಚಾಲಕ, ತಮಿಳುನಾಡಿನ ಸುಬ್ರು ಹಾಗೂ ಕ್ಲೀನರ್‌ ಶರವಣ ಅಪಾಯದಿಂದ ಪಾರಾಗಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆರ್‌ಆರ್‌ಬಿ ಕಂಪೆನಿಗೆ ಸೇರಿದ್ದ ಎರಡು ಲಾರಿಗಳು ಎನ್‌ಎಚ್‌–4ರಲ್ಲಿ ಸಂಚರಿಸುತ್ತಿದ್ದವು. ಅದರಲ್ಲಿ ಒಂದು ಲಾರಿಯ ಚಾಲಕ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಜಾಗ ಬಿಡಲು ಪ್ರಯತ್ನಿಸಿದ್ದಾನೆ. ಆಗ ರಸ್ತೆಯ ಪಕ್ಕಕ್ಕೆ ಹಾಕಲಾಗಿದ್ದ ಬೃಹತ್‌ ನಾಮಫಲಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೃಹತ್‌ ನಾಮಫಲಕವೇ ಕುಸಿದು ಬಿದ್ದಿದೆ. ಎಂಟು ಚಕ್ರವಿದ್ದ ಲಾರಿ ಪಲ್ಟಿಯಾಗಿದೆ. ಬಿದ್ದ ರಭಸಕ್ಕೆ ಸ್ಟೇರಿಂಗ್‌ ತುಂಡಾಗಿ ಹೋಗಿದೆ. ಮುಂಭಾಗದಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ ಗಾಜು ಒಡೆದು ಹೊರ ಬರಲು ಯಶಸ್ವಿಯಾಗಿದ್ದಾರೆ.

ಘಟನೆಯಿಂದ ಕೆಲವು ಸಮಯ ಸಂಚಾರ ವ್ಯತ್ಯಯವೂ ಆಗಿತ್ತು. ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಕ್ರೇನ್‌ ಮೂಲಕ ಲಾರಿಯನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದರು. ಅಪಾಯ ಅರಿತ ಸ್ಥಳೀಯರು ಟ್ಯಾಂಕ್‌ನಿಂದ ಸೋರಿಕೆಯಾಗುತ್ತಿದ್ದ ಪೆಟ್ರೋಲ್‌ ಅನ್ನು ಹೊರ ತೆಗೆದು ಪೂರ್ವಭಾವಿ ಅಪಾಯ ತಪ್ಪಿಸಿದರು. ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.