ಹರಪನಹಳ್ಳಿ: ಶಿಕ್ಷಕನೊಬ್ಬ ವಿದ್ಯಾರ್ಥಿನಿ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ದಾವಣಗೆರೆ ಚೈಲ್ಡ್ಲೈನ್ ಸಂಸ್ಥೆ ಹಾಗೂ ಪೋಷಕರು ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ.
ತಾಲ್ಲೂಕಿನ ತೌಡೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕ್ಯಾರಕಟ್ಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಪ್ರಕರಣದ ಆರೋಪಿ.
13 ವರ್ಷಗಳಿಂದ ಕ್ಯಾರಕಟ್ಟೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿರುವ ಈತ ತನ್ನ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮೂವರು ಬಾಲಕರನ್ನು, ಶಾಲೆಯ ಮುಖ್ಯಶಿಕ್ಷಕರು ಹಾಗೂ ಪೋಷಕರಿಗೆ ಮಾಹಿತಿ ನೀಡದೆ, ಈಚೆಗೆ ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರೆದುಕೊಂಡು ಹೋಗ್ದ್ದಿದ.
ಈ ಪ್ರಯಾಣದ ಸಂದರ್ಭದಲ್ಲಿಯೇ ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಮ್ಮೇಳನ ಮುಗಿದ ಬಳಿಕ ಹರಪನಹಳ್ಳಿಯ ಗೆಳೆಯನ ಮನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ವಾಸ್ತವ್ಯ ಹೂಡಿದ್ದು, ಆ ವೇಳೆಯಲ್ಲಿಯೂ ಸಹ, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಚೈಲ್ಡ್ಲೈನ್ ಸಂಸ್ಥೆಯ ನಿರ್ದೇಶಕ ಫಾ.ಕುರಿಯಾಕೊಸ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಲೈಂಗಿಕ ಶೋಷಣೆಗೆ ಒಳಗಾದ ವಿದ್ಯಾರ್ಥಿನಿಯರು ಭಯದಿಂದ ವಿಷಯ ಮುಚ್ಚಿಟ್ಟಿದ್ದರು. ಇತ್ತೀಚೆಗೆ ತಾವು ಅನುಭವಿಸಿದ ಹಿಂಸೆಯ ನೋವನ್ನು ಚೈಲ್ಡ್ಲೈನ್ ಸಂಸ್ಥೆಯ ಮುಂದೆ ಬಿಚ್ಚಿಟ್ಟಿದ್ದಾರೆ. ಪ್ರಕರಣದ ಬಗ್ಗೆ ಇಲಾಖೆ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.