ADVERTISEMENT

ಸಮಗ್ರ ನೀರಾವರಿ ಯೋಜನೆ ಜಾರಿಗೆ ಬದ್ಧ: ಎಸ್‌ವಿಆರ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 6:30 IST
Last Updated 15 ಆಗಸ್ಟ್ 2012, 6:30 IST

ಜಗಳೂರು: ತಾಲ್ಲೂಕಿಗೆ ಸಮಗ್ರ ನೀರಾವರಿ ಯೋಜನೆ ಬೇಡಿಕೆ ಈಡೇರಿಕೆಗಾಗಿ ಹೋರಾಟ ಸೇರಿದಂತೆ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದಲ್ಲಿ ಈಚೆಗೆ ನಡೆದ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ದಶಕಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕು ಸೇರ್ಪಡೆಯಾಗಲು ಶ್ರಮಿಸಿದ್ದೇನೆ. ಪ್ರಥಮ ಹಂತದಲ್ಲಿ ತಾಲ್ಲೂಕಿನ 18,500 ಎಕರೆ ನೀರಾವರಿಗೆ ಆದೇಶವಾಗಿದೆ. ಸಮಗ್ರ ನೀರಾವರಿ ಆಗಬೇಕು ಎಂಬ ಬೇಡಿಕೆ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದೆ. ಒಂದು ವರ್ಷದ ಒಳಗಾಗಿ ತಾಲ್ಲೂಕಿಗೆ ಭದ್ರಾ ನೀರು ಹರಿದುಬರಲಿದೆ ಎಂದರು.

ತಾಲ್ಲೂಕಿನ ಫ್ಲೋರೈಡ್‌ಪೀಡಿತ 108 ಹಳ್ಳಿಗಳಿಗೆ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಚುನಾವಣೆಗೂ ಮುನ್ನ ಈ ಯೋಜನೆ ಜಾರಿಯಾಗಲಿದೆ. ಹಟ್ಟಿ ಚಿನ್ನದ ಗಣಿ ನಿಗಮ ಸಾಮಾಜಿಕ ಭದ್ರತಾ ಯೋಜನೆಯಡಿ ತಾಲ್ಲೂಕಿನ 23 ಬಸ್‌ನಿಲ್ದಾಣಗಳನ್ನು ನಿರ್ಮಿಸಲಾಗುವುದು. ರೂ.   20 ಲಕ್ಷ ಅನುದಾನವನ್ನು ಸಾಧು ವೀರಶೈವ ಸಮಾಜ ಹಾಗೂ ತಲಾ  ರೂ. 10 ಲಕ್ಷ ಅನುದಾನವನ್ನು ಭೋವಿ ಹಾಗೂ ನಾಯಕ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನೀಡಲಾಗುವುದು ಎಂದು ರಾಮಚಂದ್ರ ಹೇಳಿದರು.

ADVERTISEMENT

ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಮಹತ್ವದ ಯೋಜನೆ ತಾಲ್ಲೂಕಿಗೆ ಜಾರಿಯಾಗುತ್ತಿದೆ. ಆದರೆ, ಪ್ರಸ್ತುತ ನೀಡಿರುವ 2.4 ಟಿಎಂಸಿ ನೀರು ಸಾಕಾಗುವುದಿಲ್ಲ. ಕೋಲಾರ ಜಿಲ್ಲೆಗೆ ಮೀಸಲಿರಿಸಿದ 5 ಟಿಎಂಸಿ ನೀರನ್ನು ತಾಲ್ಲೂಕಿಗೆ ನೀಡಿದಲ್ಲಿ ಸಮಗ್ರ ನೀರಾವರಿ ಸಾಧ್ಯ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಪಿ. ಪಾಲಯ್ಯ, ಎಚ್. ನಾಗರಾಜ್, ಮುಖಂಡರಾದ ಕೆ.ಬಿ. ಕಲ್ಲೇರುದ್ರೇಶ್, ಹನುಮಂತಾಪುರ ಕೃಷ್ಣಮೂರ್ತಿ, ಸುಭಾಷ್‌ಚಂದ್ರ ಬೋಸ್, ಆರ್. ಓಬಳೇಶ್, ಎಚ್.ಸಿ. ಮಹೇಶ್, ಡಾ.ರಂಗಯ್ಯ, ದೇವಿಕೆರೆ ಗುರುಸಿದ್ದಪ್ಪ, ಎಸ್.ಕೆ. ರಾಮರೆಡ್ಡಿ, ಲತೀಫ್‌ಸಾಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.