ADVERTISEMENT

ಸಾವು, ಬದುಕಿನ ನಡುವೆ ಹೋರಾಟ!

ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:27 IST
Last Updated 4 ಮಾರ್ಚ್ 2014, 9:27 IST

ದಾವಣಗೆರೆ: ಆಕೆ ಮುದ್ದು ಕಂದಮ್ಮನ ಹೆತ್ತು ತಾಯ್ತನ ಅನುಭವಿಸುವ ಕಾಲ. ಆದರೆ, ವೈದ್ಯರ ನಿರ್ಲಕ್ಷ್ಯವೊ? ವಿಧಿಯ ಆಟವೊ? ಗೊತ್ತಿಲ್ಲ. ಆಕೆ ಜಿಲ್ಲಾ ಆಸ್ಪತ್ರೆಯ ಬೆಡ್‌ವೊಂದರ ಮೇಲೆ ಸಾವು– ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ!

ಆಕೆಗೆ ಬದುಕು ಭಾರವಾಗಿದೆ; ಕಂಗಳಲ್ಲಿ ಬದುಕುವ ಆಸೆ ಕಮರಿ ಹೋಗಿದೆ... ಇಂತಹ ಸ್ಥಿತಿಯಲ್ಲಿ ಮೂರು ತಿಂಗಳಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ನರಳಾಟ ಅನುಭವಿಸುತ್ತಿರುವವರು ಚಿತ್ರದುರ್ಗ ಜಿಲ್ಲೆ ಸಿದ್ದಾಪುರ ಗ್ರಾಮದ ಮುತ್ತಮ್ಮ ರುದ್ರೇಶ್‌ ಎಂಬ ಬಾಣಂತಿ.

ಆಕೆ ಈ ಪರಿಸ್ಥಿತಿಗೆ ಬರುವುದಕ್ಕೆ ಕಾರಣ ಏನು ಎಂಬುದನ್ನು ಆಕೆ ತಾಯಿ ಗಂಗಮ್ಮ ಸೋಮವಾರ ಮಾಧ್ಯಮದವರ ಎದುರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರೆ ಅಲ್ಲಿದ್ದ ಇತರ ರೋಗಿಗಳ ಕಣ್ಣಾಲಿಗಳಲ್ಲೂ ನೀರು ತುಂಬಿ ಬಂದವು. ಮಗಳ ಈ ಸ್ಥಿತಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಕುಟುಂಬದವರ ಆರೋಪ.

ಘಟನೆ ಹಿನ್ನೆಲೆ: ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುತ್ತಮ್ಮ ಅವರನ್ನು ಕಳೆದ ಡಿ.2ರಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸಹಜ ಹೆರಿಗೆ ಆಗುವುದಿಲ್ಲ; ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಹೊರ ತೆಗೆಯಬೇಕು ಎಂದು ವೈದ್ಯರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕೆ ಒಪ್ಪಿಗೆ ನೀಡಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಹೆಣ್ಣು ಮಗುವನ್ನು ಹೊರ ತೆಗೆಯಲಾಗಿದೆ.

‘ಶಸ್ತ್ರಚಿಕಿತ್ಸೆಯ ವೇಳೆ ಚಿತ್ರದುರ್ಗದ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಕರುಳಬಳ್ಳಿ ಸೇರಿಸಿ ಹೊಲಿಗೆ ಹಾಕಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆ ಮಾಡಿದ ಜಾಗದಿಂದ ಸೇವಿಸಿದ ಆಹಾರ, ಗಂಜಿ, ನೀರು ಭೇದಿ ಬರುತ್ತಿದೆ. ಈ ಅನಾಹುತಕ್ಕೆ ವೈದ್ಯರೇ ಹೊಣೆ. ಶಸ್ತ್ರಚಿಕಿತ್ಸೆಯ ಬಳಿಕ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಆಗ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸೂಚಿಸಿದರು. ಅವರ ಸೂಚನೆಯ ಮೇರೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮೂರು ತಿಂಗಳಾದರೂ ಆಕೆ ಸರಿಹೋಗಿಲ್ಲ’ ಎಂದು ತಾಯಿ ಗಂಗಮ್ಮ ಹೇಳಿದರು.

ಆಕೆ ಜಿಲ್ಲಾ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೆ ಅತ್ತ ತಾಯಿ ಆಗಮನಕ್ಕಾಗಿ ಎಳೆಯ ಕಂದಮ್ಮ ಕಾಯುತ್ತಿದೆ. ಮೂರು ತಿಂಗಳಿಂದ ಮಗಳ ಯಾತನಾಮಯ ಬದುಕನ್ನು ಕಂಡು ದುಃಖಿಸುತ್ತಿದ್ದಾರೆ.

‘ಕೂಲಿ–ನಾಲಿ ಮಾಡಿ ಬದುಕು ಕಟ್ಟಿಕೊಳ್ಳಬೇಕಾಗಿದೆ. ನಮ್ಮ ಬದುಕಿನಲ್ಲಿಯೇ ವಿಧಿ ಈ ರೀತಿ ಆಟವಾಡುತ್ತಿದ್ದಾನೆ. ಯಾರಿಗೂ ಇಂತಹ ಸ್ಥಿತಿ ಬರಬಾರದು’ ಎಂದು ತಾಯಿ ಕಣ್ಣೀರಿಟ್ಟರು.

ಆರೋಪ: ಶಸ್ತ್ರ ಚಿಕಿತ್ಸೆ ವೇಳೆ ಕರುಳು ಸೇರಿಸಿ ಹೊಲಿಗೆ ಹಾಕಿರುವ ವೈದ್ಯರಿಗೆ ಶಿಕ್ಷೆ ಆಗಬೇಕು. ಯಾರಿಗೂ ವಿಷಯ ತಿಳಿಸದಿದ್ದರೆ ವೈದ್ಯಕೀಯ ವೆಚ್ಚ ಭರಿಸುವುದಾಗಿ ವೈದ್ಯರು ಹೇಳಿದ್ದರು. ಇಂದಿಗೂ ಆಸ್ಪತ್ರೆಯತ್ತ ಮುಖ ಹಾಕಿಲ್ಲ. ಆ ಕುಟುಂಬಕ್ಕೆ ನ್ಯಾಯಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಬಸವರಾಜ್‌ ಆಗ್ರಹಿಸಿದ್ದಾರೆ.

ಮತ್ತೆ ಶಸ್ತ್ರಚಿಕಿತ್ಸೆ ಅಸಾಧ್ಯ?
ಶಸ್ತ್ರ ಚಿಕಿತ್ಸೆ ಮಾಡಿದ ಬಾಣಂತಿಯನ್ನು ಉತ್ತಮವಾಗಿ ನೋಡಿಕೊಳ್ಳದಿದ್ದರೆ ಗಾಯ ನಂಜಾಗಿ ಇಂತಹ ಸ್ಥಿತಿಗೂ ಬಾಣಂತಿ ತಲುಪಬಹುದು. ಕರುಳಬಳ್ಳಿ ಸಮೇತ ಹೊಲಿಗೆ ಹಾಕಿದ್ದರೆ ಮೂರು ದಿನಗಳ ಒಳಗೆ ಬಾಣಂತಿಗೆ ಹೊಟ್ಟೆ ಉಬ್ಬರ, ವಾಂತಿ ಕಾಣಿಸಿಕೊಳ್ಳುತ್ತಿತ್ತು. ದಾವಣಗೆರೆ ಆಸ್ಪತ್ರೆಗೆ ಸೇರಿದ ದಿನದಿಂದಲೂ ಉತ್ತಮವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಸ್ಥಿತಿ ನೋಡಿದರೆ ಮತ್ತೆ ಶಸ್ತ್ರ ಚಿಕಿತ್ಸೆ ಅಸಾಧ್ಯ ಆಗಬಹುದು?

– ಡಾ.ನೀಲಾಂಬಿಕೆ, ಆರ್‌ಎಂಒ, ಜಿಲ್ಲಾ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT