ADVERTISEMENT

`ಸೌಲಭ್ಯವಿದ್ದರೂ ಉನ್ನತ ಶಿಕ್ಷಣದಲ್ಲಿ ಹಿಂದೆ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:06 IST
Last Updated 25 ಏಪ್ರಿಲ್ 2013, 9:06 IST

ದಾವಣಗೆರೆ: ಸರ್ಕಾರ ಹಲವು ಸೌಲಭ್ಯ ಕಲ್ಪಿಸಿದ್ದರೂ ಉನ್ನತ ಶಿಕ್ಷಣ ಪಡೆಯುವಲ್ಲಿ ನಾವು ಹಿಂದೆ ಸರಿಯುತ್ತಿದ್ದೇವೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್. ಇಂದುಮತಿ ವಿಷಾದಿಸಿದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಈಚೆಗೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಿಇಟಿ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರವು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು, ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಇಂದಿನ ವಿಜ್ಞಾನ ವಿದ್ಯಾರ್ಥಿಗಳು ಎಂಜಿನಿಯರ್ ಅಥವಾ ವೈದ್ಯರಾಗಬೇಕು ಎಂದೇ ಬಯಸುತ್ತಿದ್ದಾರೆ. ಈ ಬದಲಿಗೆ ಉನ್ನತ ಶಿಕ್ಷಣದತ್ತ ಮನಸ್ಸು ಮಾಡಬೇಕು. ಪೋಷಕರು, ಪ್ರತಿಷ್ಠೆ ಬದಿಗೊತ್ತಿ ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ದಾವಣಗೆರೆ ವಿವಿಯಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿಯಲ್ಲಿ ಪಿಎಚ್.ಡಿ ಪಡೆದಿರುವವರು ಇಬ್ಬರು ಮಾತ್ರ ಎಂದು ತಿಳಿಸಿದರು.
ವಿಶ್ವಚೇತನ ಶಿಕ್ಷಣ ಟ್ರಸ್ಟ್‌ನ ಮುಖ್ಯಸ್ಥೆ ವಿಜಯಲಕ್ಷ್ಮೀ ಮಾತನಾಡಿ, ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆಯಬೇಕು ಎಂದರು.
ವಿದ್ಯಾರ್ಥಿಗಳಿಗೆ ಸಿಇಟಿ ಕೋರ್ಸ್‌ನ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ಸಿಇಟಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಗೋಣಿವಾಡದ ಸೋಮೇಶ್ವರ ವಸತಿಶಾಲೆಯ ಮುಖ್ಯಶಿಕ್ಷಕಿ ಪಿ.ಎಚ್. ವೀಣಾ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ಎಚ್. ವಿನಯ್, ಪ್ರದೀಪ್, ರಾಕೇಶ್, ಕರ್ಣ, ಸುಚೇತಾ, ಸ್ವಾಮಿ, ಸೋಹನ್ ಇದ್ದರು.

ಪಿ. ನಂದಿನಿ ಪ್ರಾರ್ಥಿಸಿದರು. ಅಧ್ಯಕ್ಷ ಕೆ.ಎನ್. ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ವಿನಯ್ ವಂದಿಸಿದರು.

ಇಂದು ಆಂಜನೇಯ ಸ್ವಾಮಿ ರಥೋತ್ಸವ
ದಾವಣಗೆರೆ:
ಹರಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಗ್ರಾಮದಲ್ಲಿ ಏ. 25ರಂದು ಆಂಜನೇಯ ಸ್ವಾಮಿ ರಥೋತ್ಸವ ಜರುಗಲಿದೆ.ಅಂದು ಸಂಜೆ 5ಕ್ಕೆ ಕಡುಬಿನ ಸಂಜೆ 6ಕ್ಕೆ ಓಕುಳಿ ಉತ್ಸವ, ರಾತ್ರಿ 8ಕ್ಕೆ ಭೂತಬಲ್ಲನ ಆಟ ನಡೆಯಲಿದೆ. ಏ. 27, 28ರಂದು ಮಧ್ಯಾಹ್ನ 3ಕ್ಕೆ ಬಯಲು ಕುಸ್ತಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT