ಹರಿಹರ: ತಾಲ್ಲೂಕಿನ ‘ಕಿಲ್ಲರ್ ರಸ್ತೆ’ ಎಂದು ಅಪಖ್ಯಾತವಾಗಿರುವ ಶಿವಮೊಗ್ಗ ರಸ್ತೆಯಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.
ಅಪಘಾತ 1: ಬೆಳ್ಳೂಡಿ ಗ್ರಾಮ ಸಮೀಪದ ಕನಕ ಗುರುಪೀಠದ ಶಾಖಾ ಮಠದ ಬಳಿ ಸಂಜೆ ಕೆಎಸ್ಆರ್ಟಿಸಿ ಬಸ್ ಹಾಗೂ ಸರಕು ಸಾಗಣೆ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಈ ಅವಘಡದಲ್ಲಿ ರಾಣೇಬೆನ್ನೂರಿನ ಶೌಕತ್ (35) ಹಾಗೂ ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದ ಇರ್ಫಾನ್ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತ 2: ಇದೇ ರಸ್ತೆಯ ಭಾಸ್ಕರ್ರಾವ್ ಕ್ಯಾಂಪ್ ಬಳಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಪೆ ಆಟೊ ಮತ್ತು ಸ್ವಿಫ್ಟ್ ಕಾರಿನ ನಡುವಣ ಅಪಘಾತದಲ್ಲಿ 11 ಜನ ಗಾಯಗೊಂಡಿದ್ದಾರೆ.ನಗರದಿಂದ ಮಲೇಬೆನ್ನೂರು ಕಡೆಗೆ ಆಟೊ ಹೋಗುತ್ತಿತ್ತು. ಕಾರು ಮಲೇಬೆನ್ನೂರು ಕಡೆಯಿಂದ ನಗರಕ್ಕೆ ಬರುತ್ತಿತ್ತು.
ಗಾಯಾಳುಗಳನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಲೇಬೆನ್ನೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಪ್ರಭಾರ ಸಿಪಿಐ ಜೆ.ರಮೇಶ್, ಪಿಎಸ್ಐಗಳಾದ ಸಿದ್ದೇಗೌಡ, ಎಚ್.ಸುನಿಲ್ಕುಮಾರ್, ಸಿಬ್ಬಂದಿ ಜಿ.ಜೆ.ಮಹೇಶಕುಮಾರ್ ಅವರೂ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.