ಮಲೇಬೆನ್ನೂರು: ಬಿಡುವಿನ ಸಮಯ ವ್ಯರ್ಥ ಮಾಡದೇ ಯಾವುದಾದರೂ ಕೆಲಸ ಮಾಡಿ ಸ್ವಯಂ ಉದ್ಯೋಗಿಗಳಾಗಿ ನಿರುದ್ಯೋಗಕ್ಕೆ ತೆರೆಹಾಕಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಣೇಬೆನ್ನೂರು ವಲಯದ ಯೋಜನಾಧಿಕಾರಿ ಬಾಬು ನಾಯ್ಕ ಸಲಹೆ ನೀಡಿದರು.
ಸಮೀಪದ ಕೊಕ್ಕನೂರಿನಲ್ಲಿ ಸೋಮವಾರ ಕುಪ್ಪೇಲೂರು ವಲಯದ `ಪ್ರಗತಿ ಬಂಧು ಹಾಗೂ 56 ಸ್ವಸಹಾಯ ಗುಂಪು'ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರದ ಯೋಜನೆ ಅಡಿ ಹಲವಾರು ಉದ್ಯೋಗ, ಸಮಾಜ ಸೇವೆ ಮಾಡಲು ಅವಕಾಶಗಳಿವೆ. ಸ್ವಸಹಾಯ ಗುಂಪುಗಳೊಡನೆ ಒಡನಾಟ ಬೆಳೆಸಿಕೊಳ್ಳಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ಪಾಟೀಲ ಅಧ್ಯಕ್ಷತೆ ವಹಿಸಿ, ಲೆಕ್ಕದ ಪುಸ್ತಕ ವಿತರಿಸಿದರು. ಗ್ರಾಮದ ಮುಖ್ಯಬೀದಿಯಲ್ಲಿ ಮಹಿಳೆಯರು ಕಳಸ ಹೊತ್ತು ಸಾಗಿ ಬಂದರು. ಕಾರ್ಯಕ್ಷೇತ್ರದ ವರದಿಯನ್ನು ಸಂಘದ ಪ್ರತಿನಿಧಿ ಗಿರಿರಾಜ್ ವಾಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಪಿ.ಕೆ. ಪ್ರಭುಗೌಡ, ಎಪಿಎಂಸಿ ನಿರ್ದೇಶಕ ಎಂ.ಪಿ. ಪರಮೇಶ್ವರಪ್ಪ, ಗ್ರಾಮ ಪಂಚಾಯ್ತಿ ಸದಸ್ಯೆ ಬಸಮ್ಮ, ಸುತ್ತಮುತ್ತಲ ಗ್ರಾಮಗಳಾದ ಗೋವಿನಹಾಳ್, ಹಿಂಡಸಗಟ್ಟೆ, ವಾಸನ, ಹಳ್ಳಿಹಾಳ್, ಗುಡ್ಡದ ತುಮ್ಮಿನಕಟ್ಟೆ,ಮೂಗಿನಗೊಂಡಿ ಕಡಾರನಾಯ್ಕನಹಳ್ಳಿ, ಗುಡ್ಡದ ಬೇವಿನಹಳ್ಳಿ ಗ್ರಾಮಸ್ಥರು ಇದ್ದರು.
ಮೇಲ್ವಿಚಾರಕ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಸ್ವಾಗತಿಸಿದರು. ಸೋಮು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.