ADVERTISEMENT

ಹಕ್ಕುಉಲ್ಲಂಘನೆ ತಡೆಗೆ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 9:40 IST
Last Updated 7 ಆಗಸ್ಟ್ 2011, 9:40 IST
ಹಕ್ಕುಉಲ್ಲಂಘನೆ ತಡೆಗೆ ಜಾಗೃತಿ ಅಗತ್ಯ
ಹಕ್ಕುಉಲ್ಲಂಘನೆ ತಡೆಗೆ ಜಾಗೃತಿ ಅಗತ್ಯ   

ದಾವಣಗೆರೆ: ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಜಾತೀಯತೆ ಹಾಗೂ ಭ್ರಷ್ಟಾಚಾರ ಮಾನವ ಹಕ್ಕುಗಳ ನಿರಂತರ ಉಲ್ಲಂಘನೆಗೆ ಕಾರಣ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್ ಪ್ರತಿಪಾದಿಸಿದರು.

ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿನಾಯಕ ಟ್ರಸ್ಟ್ ಹೈಸ್ಕೂಲ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಾನಾಂಗೀಯ ದ್ವೇಷ ಹಾಗೂ ಸರ್ವಾಧಿಕಾರದ ಅಮಲಿನಲ್ಲಿ ಎರಡು ಮಹಾ ಯುದ್ಧಗಳು ನಡೆದವು.
 
ಜೀವಕ್ಕೆ ಬೆಲೆ ಇಲ್ಲದಂತೆ ಮಾನವರ ನರಮೇಧ ನಡೆಸಲಾಯಿತು. ಈ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ಮತ್ತೆ ಮರುಕಳಿಸದಂತೆ ಮಾಡಲು ವಿಶ್ವಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳ ಘೋಷಣೆ ಮಾಡಿತು ಎಂದು ವಿವರಿಸಿದರು.

ಅಂತರರಾಷ್ಟ್ರೀಯ ಸಹಕಾರ,  ಸಮಸ್ಯೆಗಳ ಶಾಂತಿಯುತ ಪರಿಹಾರ, ರಾಷ್ಟ್ರಗಳ ನಡುವಿನ ಬಲ ಪ್ರಯೋಗ ತಡೆಯಲು ಮಾನವ ಹಕ್ಕುಗಳ ಘೋಷಣೆ ಸಹಕಾರಿಯಾಗಿದೆ ಎಂದರು.ಎಲ್ಲರೂ ಹುಟ್ಟುವಾಗ ಸ್ವತಂತ್ರರಾಗಿದ್ದರೂ, ನಂತರ ಲಿಂಗ, ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆ ಆಧಾರದಲ್ಲಿ ಶೋಷಣೆ ನಡೆಯುತ್ತಿದೆ.

ಕಾನೂನು ಬಿಗಿ ಇದ್ದರೂ ಭ್ರೂಣಹತ್ಯೆ, ಮರ್ಯಾದಾ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತಾವಿಕ ಮಾತನಾಡಿದ ಪ್ರಾಧ್ಯಾಪಕ ಕೆ.ಟಿ. ನಾಗರಾಜ್ ನಾಯ್ಕ, ಹಕ್ಕುಗಳ ಕುರಿತು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಸಂಘ-ಸಂಸ್ಥೆಗಳು, ಸಂಘಟನೆಗಳು ಜನ ಜಾಗೃತಿ ಮೂಡಿಸಲು ಕೈ ಜೋಡಿಸಬೇಕು ಎಂದು ಕೋರಿದರು. ಎಂ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.