ದಾವಣಗೆರೆ: ಕೃಷಿ ಇಲಾಖೆಯು ಕೇಂದ್ರ ಪುರಸ್ಕೃತ ಲಘು ನೀರಾವರಿ ಯೋಜನೆಯ ಶೇ 75ರ ಸಹಾಯಧನದ ಅಡಿ ತುಂತುರು ಹನಿ ನೀರಾವರಿ ಉಪಕರಣ ಹಾಗೂ ಹನಿ ನೀರಾವರಿ ಉಪಕರಣಗಳನ್ನು ರೈತರಿಗೆ ವಿತರಣೆ ಮಾಡಲು ಉದ್ದೇಶಿಸಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹನಿ ನೀರಾವರಿ ಉಪಕರಣಗಳನ್ನು (ಡ್ರಿಪ್) ಕೃಷಿ ಇಲಾಖೆಯಿಂದ ಕೇವಲ ಹತ್ತಿ ಮತ್ತು ಕಬ್ಬು ಬೆಳೆಗಳಿಗೆ ಮಾತ್ರ ಅಳವಡಿಸಲಾದ ಉಪಕರಣಗಳಿಗೆ ಮಾತ್ರ ಸಹಾಯಧನ ನೀಡಲಾಗುತ್ತಿದೆ. ಆದರೆ, ತುಂತುರು ಹನಿ ನೀರಾವರಿ ಉಪಕರಣಗಳನ್ನು ರೈತರು ಇತರೆ ಬೆಳೆಗಳಾದ ಮುಸುಕಿನ ಜೋಳ, ಹೈಬ್ರಿಡ್ ಜೋಳ, ಶೇಂಗಾ, ಸೂರ್ಯಕಾಂತಿ ಮತ್ತು ಇತರೆ ದ್ವಿದಳ ಧಾನ್ಯ ಬೆಳೆಗಳಿಗೆ ಉಪಯೋಗಿಸಬಹುದು.
ಪ್ರಸಕ್ತ ವರ್ಷದಲ್ಲಿ ಮುಂಗಾರು ದುರ್ಬಲಗೊಂಡಿದೆ. ರೈತರಿಗೆ ತುಂತುರು ಹನಿ ನೀರಾವರಿ ಉಪಕರಣಗಳ ಅಗತ್ಯತೆ ಹೆಚ್ಚಿದೆ. ಇಲಾಖೆಯ ದರ ಕರಾರಿನಲ್ಲಿ ಅನುಮೋದನೆಗೊಂಡ ಸಂಸ್ಥೆಗಳ ತುಂತುರು, ಹನಿ ನೀರಾವರಿ ಉಪಕರಣಗಳಿಗೆ ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದಲ್ಲಿ ಈ ಕೆಳಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ದಾಖಲೆಗಳು: ನಿಗದಿತ ಅರ್ಜಿ ನಮೂನೆ, 2.5 ಎಕರೆ (1 ಹೆಕ್ಟೇರ್) ಕನಿಷ್ಠ ಜಮೀನು ಪಹಣಿ, ನೀರಿನ ಹಕ್ಕುಪತ್ರ, ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರ, ರೂ 20 ಬಾಂಡ್ ಪೇಪರ್ನಲ್ಲಿ ಸ್ವಂತ ಉಪಯೋಗಕ್ಕೆ ಮತ್ತು 3 ವರ್ಷ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ, ಜಮೀನು ನಕಾಶೆ ಪ್ರತಿ ಸಲ್ಲಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.