ADVERTISEMENT

ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕು ಕೃಷಿ ಅಭಿವೃದ್ಧಿಗೆ ಕೃಷಿಕ ಸಮಾಜ ಮನವಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 8:34 IST
Last Updated 3 ಜೂನ್ 2018, 8:34 IST

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳು ಭೌತಿಕವಾಗಿ, ಮತ್ತು ನೈಸರ್ಗಿಕವಾಗಿ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ  ಕೃಷಿ ವಿಚಾರದಲ್ಲಿ ಸಾಕಷ್ಟು ಪ್ರಗತಿ ಕಾಣಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಹನುಮಂತಪ್ಪ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡಿದರು. ಈ ಹಿಂದೆ ಹೊನ್ನಾಳಿ ತಾಲ್ಲೂಕು 173 ಗ್ರಾಮಗಳನ್ನು ಒಳಗೊಂಡಿತ್ತು. ಇದೀಗ ನ್ಯಾಮತಿ ತಾಲ್ಲೂಕು ರಚನೆಯಾಗಿ, ಇಬ್ಭಾಗವಾಗಿದೆ. ಒಟ್ಟಾರೆ 888 ಚ.ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ ಎಂದರು.

ಇಲ್ಲಿನ ವಾಡಿಕೆಯ ಮಳೆ ಸರಾಸರಿ 625 ಮಿ ಮೀ. ಅವಳಿ ತಾಲ್ಲೂಕು ಒಟ್ಟು 88794 ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ 56,556 ಹೆಕ್ಟೇರ್ ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಇದರಲ್ಲಿ 38,500 ಹೆಕ್ಟೇರ್ ಪ್ರದೇಶ ಮಳೆಯನ್ನು ಅವಲಂಬಿಸಿದೆ ಎಂದು ಅಂಕಿ ಅಂಶ ನೀಡಿದರು.

ADVERTISEMENT

ಈ ಅವಳಿ ತಾಲ್ಲೂಕುಗಳಲ್ಲಿ ಭದ್ರಾ ಮತ್ತು ತುಂಗಾ ನಾಲೆಯಿಂದ ಅಚ್ಚುಕಟ್ಟು ಪ್ರದೇಶವಿದ್ದು, ಭದ್ರಾ ನದಿಯಿಂದ ಮಾತ್ರ ಎರಡೂ ಹಂಗಾಮಿನಲ್ಲೂ ನೀರನ್ನು ಒದಗಿಸಲಾಗುತ್ತದೆ. ಆದರೆ ತುಂಗಾ ನಾಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಒದಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಗ್ರಹ: ಈ ಎರಡೂ ತಾಲ್ಲೂಕುಗಳ ಪ್ರಮುಖ ಕೆರೆಗಳ ಪುನಶ್ಚೇತನ ಮತ್ತು ತುಂಗಾಭದ್ರಾ ನದಿ ಹಾಗೂ ತುಂಗಾ ಮೇಲ್ದಂಡೆ ಮುಖಾಂತರ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ಎಲ್ಲಾ ಜಮೀನುಗಳನ್ನು ಪುನರ್ ಸರ್ವೆ ಮಾಡಿಸಬೇಕು, ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಪಶು ಸಂಪತ್ತಿಗಾಗಿ ಗೋಮಾಳ ಭೂಮಿಯನ್ನು ಕಡ್ಡಾಯವಾಗಿ ಮೀಸಲಿಡಬೇಕು, ಹೊಲದ ಕಾಲುವೆಗಳನ್ನು ಸಿಮೆಂಟ್ ಲೈನಿಂಗ್ ಮಾಡಿಸಬೇಕು, ನ್ಯಾಮತಿ ತಾಲ್ಲೂಕಿನಲ್ಲಿ ತಾಲ್ಲೂಕು ಕೃಷಿಕ ಸಮಾಜ ಭವನ ನಿರ್ಮಿಸಬೇಕು, ತಾಲ್ಲೂಕಿನಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ ನಿರ್ಮಾಣ ಹಾಗೂ ಪಶು ಆಸ್ಪತ್ರೆಗಳನ್ನು ಆಧುನೀಕರಿಸಿ ಉನ್ನತೀಕರಿಸಬೇಕು ಎಂದು ಅವರು ಆಗ್ರಹಿಸಿ ಮನವಿ ಸಲ್ಲಿಸಿದರು.

ಕೃಷಿಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಕುಂಬಳೂರು ಹಾಲಪ್ಪ, ನಿರ್ದೇಶಕರಾದ ಎಲ್. ರುದ್ರನಾಯ್ಕ, ಸುರೇಶ್ ಗೋವಿನಕೋವಿ, ಕೃಷ್ಣಮೂರ್ತಿ, ಬಿ.ಎಚ್. ಜಯಣ್ಣ, ಬೀರಗೊಂಡನಹಳ್ಳಿ ಶಿವನಗೌಡ, ಜಯಮ್ಮ, ಗೌರಮ್ಮ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.