ADVERTISEMENT

‘ನೋಟಾ’ ಬಗ್ಗೆ ಮತದಾರರಿಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 5:34 IST
Last Updated 20 ಮಾರ್ಚ್ 2014, 5:34 IST

ಜಗಳೂರು: ಏಪ್ರಿಲ್ 17ರಂದು ನಡೆಯುವ ಲೋಕಸಭಾ ಚುನಾವಣೆಗೆ ತಾಲ್ಲೂಕಿನ ಎಲ್ಲಾ 256 ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತಾಕಾರ್ಯ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ.ಟಿ. ಮಂಜುನಾಥನ್ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯ ನಂತರ  ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ  ಒಟ್ಟು 256 ಮತಗಟ್ಟೆ ಸ್ಥಾಪಿಸಲಾಗಿದ್ದು, 81 ಸೂಕ್ಷ್ಮ ಹಾಗೂ 38 ಅತಿಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಒಟ್ಟು 1,70,588 ಮತದಾರರು ಇದ್ದು, ಪುರುಷರು 87,287, ಮಹಿಳೆಯರು 83,289 ಹಾಗೂ ಇತರ 12 ಮತದಾರರು ಒಳಗೊಂಡಿದ್ದಾರೆ. ತಾಲ್ಲೂಕು ಮಟ್ಟ ದಲ್ಲಿ ನಡೆಯುವ ರಾಜಕೀಯ ಪಕ್ಷದ ಅಭ್ಯರ್ಥಿಗಳ ರಾಜಕೀಯ ಸಭೆ, ಸಮಾರಂಭಗಳು ಹಾಗೂ ವಾಹನಗಳಿಗೆ ಪರವಾನಗಿ ನೀಡುವ ಕುರಿತು ಇದೇ ಮೊದಲ ಬಾರಿ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 26, 27 ನಾಮಪತ್ರ ಪರಿಶೀಲನೆ, ಉಮೇದು ವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ  ದಿನ ಮಾರ್ಚ್‌ 29 ಆಗಿರುತ್ತದೆ ಎಂದು ತಿಳಿಸಿದರು.

ಚುನಾವಣಾ ಸಿಬ್ಬಂದಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುವುದು. ಯಾವ ಅಭ್ಯರ್ಥಿಗೂ ಮತ ಚಲಾಯಿಸದೇ ಇರುವ ನೂತನ  ನೋಟಾ ಅವಕಾಶದ ಬಗ್ಗೆ ಪ್ರತಿ ಹಳ್ಳಿಗಳಿಗೆ ತೆರಳಿ ಮತದಾರರಲ್ಲಿ  ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್‌ ರೇಷ್ಮಾ ಹಾನಗಲ್‌, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಯಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.