ದಾವಣಗೆರೆ: ಹಸಿರು ನ್ಯಾಯ ಮಂಡಳಿ ನಿರ್ದೇಶನದಂತೆ ಮಹಾನಗರ ಪಾಲಿಕೆ ಪರಿಸರ ಅಧಿಕಾರಿಗಳು ನಗರದ ವಿವಿಧ ಅಂಗಡಿ ಮಳಿಗೆಗಳ ಮೇಲೆ ಕಾರ್ಯಾಚರಣೆ ನಡೆಸಿ 120 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು ₹60 ಸಾವಿರ ದಂಡ ವಿಧಿಸಿದೆ.
ನಗರದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಸಾಗಾಣಿಕೆ, ಸಂಗ್ರಹಣೆ, ಉತ್ಪಾದನೆ ಹಾಗೂ ಮಾರಾಟವನ್ನು ಸೆ.1ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಪ್ಲಾಸ್ಟಿಕ್ ಬಳಕೆ ಮಾಡಿದ ಮಾಲ್, ಹಣ್ಣಿನ ಅಂಗಡಿ ವ್ಯಾಪಾರಸ್ಥರು ಸೇರಿ ಪ್ಲಾಸ್ಟಿಕ್ ಒಯ್ಯುತ್ತಿದ್ದ ಜನರಿಗೂ ಪಾಲಿಕೆಯ ಪರಿಸರ ಅಧಿಕಾರಿಗಳು ಭಾನುವಾರ ದಂಡ ವಿಧಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ರಾಷ್ಟ್ರೀಯ ಹಸಿರು ನ್ಯಾಯಪೀಠದ ರಾಜ್ಯಮಟ್ಟದ ಸಮಿತಿ ಮುಖ್ಯಸ್ಥ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿ ಚಂದ್ರಶೇಖರ್ ಸುಂಕದ್ ಅವರು ಎರಡು ತಂಡಗಳನ್ನು ರಚಿಸಿದ್ದರು. ಆರೋಗ್ಯ ನಿರೀಕ್ಷಕರ ಒಂದು ತಂಡ ಗಡಿಯಾರ ಕಂಬದ ಬಳಿ ದಾಳಿ ನಡೆಸಲು ಮುಂದಾದರೆ, ಪರಿಸರ ಎಂಜಿನಿಯರ್ ಶಾಲಿನಿ ಅವರ ತಂಡ ವಿವಿಧ ಮಳಿಗೆಗೆಳ ಮೇಲೆ ಮೇಲೆ ದಾಳಿ ನಡೆಸಿತು.
‘ಪ್ಲಾಸ್ಟಿಕ್ ಎಲ್ಲೇ ಬಚ್ಚಿಟ್ಟರೂ ಬಿಡುವುದಿಲ್ಲ. ಅದನ್ನು ವಶಪಡಿಸಿಕೊಳ್ಳುತ್ತೇವೆ. ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯುತ್ತದೆ. ನಗರವನ್ನು ಪ್ಲಾಸ್ಟಿಕ್ಮುಕ್ತ ಹಾಗೂ ಪ್ರಾಕೃತಿಕವಾಗಿ ಸುಂದರ ನಗರವನ್ನಾಗಿಸಲು ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು’ ಎಂದು ಪಾಲಿಕೆ ಪರಿಸರ ಎಂಜಿನಿಯರ್ ಶಾಲಿನಿ ತಿಳಿಸಿದರು.
ದಾಳಿ ವೇಳೆ ಪರಿಸರ ಎಂಜಿನಿಯರ್ ಸುನೀಲ್, ಆರೋಗ್ಯ ನಿರೀಕ್ಷಕ ರಾಮಪ್ಪ, ನೀಲಪ್ಪ, ಹೊನ್ನಪ್ಪ, ದಫೇದಾರ್ ಕಾಂತರಾಜ್, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.