ADVERTISEMENT

20ಕ್ಕೆ ಜೈಲ್‌ಭರೋ ಚಳವಳಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 7:35 IST
Last Updated 10 ಜೂನ್ 2011, 7:35 IST

ದಾವಣಗೆರೆ: ಬತ್ತಕ್ಕೆ ವೈಜ್ಞಾನಿಕ ಬೆಲೆ ಹಾಗೂ ಪ್ರೋತ್ಸಾಹಧನಕ್ಕೆ ಒತ್ತಾಯಿಸಿ ಜಿಲ್ಲಾ ರೈತ ಹೋರಾಟ ಸಮಿತಿ ಜಿಲ್ಲಾ ಬತ್ತ ಬೆಳೆಯುವ ರೈತ ಹಿತರಕ್ಷಣಾ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜೂನ್ 20ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಗೂ `ಜೈಲ್ ಭರೋ~ ಚಳವಳಿ ಹಮ್ಮಿಕೊಳ್ಳಲಾಗಿದೆ.

ವೈಜ್ಞಾನಿಕ ಬೆಲೆ ಹಾಗೂ ಪ್ರೋತ್ಸಾಹಧನದ ಬೇಡಿಕೆ ಇಟ್ಟು ಜಿಲ್ಲಾದ್ಯಂತ ರೈತರ ಜಾಥಾ, ಪ್ರತಿಭಟನೆ ಹಾಗೂ ಮೇ 25ರಂದು `ದಾವಣಗೆರೆ ಬಂದ್~ ನಡೆಸಲಾಯಿತು. ಆದರೂ, ಜಿಲ್ಲಾಡಳಿತ ಅಥವಾ ಸರ್ಕಾರ ಎಚ್ಚೆತ್ತು ಕೊಳ್ಳದ ಹಿನ್ನೆಲೆಯಲ್ಲಿ   20ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬಳಿಕ `ಜೈಲ್ ಭರೋ~ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಆವರಗೆರೆ ರುದ್ರಮುನಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಇಲಾಖೆ ಶಿಫಾರಸ್ಸಿನಂತೆ ಬತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ್ಙ 1,523 ಹಾಗೂ ರಾಜ್ಯ ಸರ್ಕಾರದಿಂದ ್ಙ 500 ಪ್ರೋತ್ಸಾಹಧನ ನೀಡಲು ಒತ್ತಾಯಿಸಲಾಗಿದೆ. ಆದರೆ, ಈ ಬೇಡಿಕೆ ಜಾರಿಗೆ ಯಾವುದೇ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಶಾಸಕರು ಹಾಗೂ ಮಂತ್ರಿಗಳ ವೇತನ ಹೆಚ್ಚಳ ಮಾಡಲಾಗಿದೆ. ಆದರೆ, ರೈತರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂದು ದೂರಿದರು.

20ರಂದು ಬೆಳಿಗ್ಗೆ 11ಕ್ಕೆ ನಗರದ ಜಯದೇವ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಗುವುದು. ಈ ಹೋರಾಟಕ್ಕೆ ಎಲ್ಲ ರೈತಪರ ಸಂಘಟನೆಗಳು, ರೈತರು, ವಿದ್ಯಾರ್ಥಿಗಳು, ಎಲ್ಲ ಸಂಘಟನೆಗಳು ಬೆಂಬಲಿಸಬೇಕು ಎಂದು  ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ವಾಸನದ ಓಂಕಾರಪ್ಪ, ಪಾಲವ್ವನಹಳ್ಳಿ ಪ್ರಸನ್ನ ಕುಮಾರ್, ವೀರೇಶ್ ಜೋಗಿಹಳ್ಳಿ, ಜಿ. ಪ್ರಭುಗೌಡ, ಆಂಜಿನಪ್ಪ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.