ದಾವಣಗೆರೆ: ಬಿಜೆಪಿ ಆಡಳಿತದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳನ್ನೇ ಹೊನ್ನಾಳಿ ಶಾಸಕರು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ದೂರಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊನ್ನಾಳಿಯಲ್ಲಿ ಡಿ.26ರಂದು ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ₹ 2,600 ಕೋಟಿ ಅನುದಾನವನ್ನು ಹೊನ್ನಾಳಿ ತಾಲ್ಲೂಕಿಗೆ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಶಾಸಕರು ಇಲಾಖಾವಾರು ಅನುದಾನ ಬಿಡುಗಡೆಯಾದ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
‘ತುಂಗಾ ನಾಲೆ ದುರಸ್ತಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಡಿಪ್ಲೊಮಾ ಕಾಲೇಜು ಮಂಜೂರು, ಹೊನ್ನಾಳಿ ಗ್ರಾಮೀಣ ಪ್ರದೇಶಗಳ ಸಿಸಿ ರಸ್ತೆ ನಿರ್ಮಾಣ, ನ್ಯಾಮತಿ ಪೊಲೀಸ್ ಠಾಣೆ ಉದ್ಘಾಟನೆ, ಸುವರ್ಣ ಗ್ರಾಮ ಯೋಜನೆ ಜಾರಿ ಒಳಗೊಂಡಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಮ್ಮ ಆಡಳಿತದ ಅವಧಿಯಲ್ಲಿಯೇ ಜಾರಿಯಾಗಿವೆ’ ಎಂದು ಹೇಳಿದರು.
‘₹ 2,600 ಕೋಟಿ ಅನುದಾನ ತರುವ ಮೂಲಕ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಅಧಿಕೃತ ಜಾಹೀರಾತು ಕೂಡ ನೀಡದೇ ಈ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳಿಗೆ ಮತ್ತೆ ಸಿಎಂ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದಾರೆ’ ಎಂದು ಟೀಕಿಸಿದರು.
‘ನಮ್ಮ ಅವಧಿಯಲ್ಲಿ ₹ 2,600 ಕೋಟಿ ಅನುದಾನ ತಂದು ತಾಲ್ಲೂಕು ಅಭಿವೃದ್ಧಿ ಪಡೆಸಿದ್ದೇನೆ. ಈ ಬಗ್ಗೆ ದಾಖಲೆಗಳನ್ನು ನೀಡಲು ನಾನು ಸಿದ್ಧನಿದ್ದೇನೆ. ಜತೆಗೆ 14 ಸಾವಿರ ಹೆಚ್ಚುವರಿ ಆಶ್ರಯ ಮನೆಗಳನ್ನೂ ಮಂಜೂರು ಮಾಡಿಸಿ, ಅರ್ಹರಿಗೆ ಮನೆ ನಿರ್ಮಿಸಿಕೊಟ್ಟಿದ್ದೇನೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ’ ಎಂದು ಹೇಳಿದರು.
ಶಾಸಕರು ತಮ್ಮ ಅವಧಿಯಲ್ಲಿ ಮಂಜೂರಾದ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಡಿ.ರಾಜಣ್ಣ, ದಿಡಗೂರು ಪಾಲಾಕ್ಷಪ್ಪ, ಅನಿಲ್, ಕೂಲಂಬಿ ಬಸವರಾಜ್ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.