ADVERTISEMENT

ಸಿದ್ಧರಾಮೇಶ್ವರರ ಜಯಂತ್ಯುತ್ಸವಕ್ಕೆ ಸಿದ್ಧತೆ

ಹೊನ್ನಾಳಿಯಲ್ಲಿ 14,15 ರಂದು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 6:27 IST
Last Updated 11 ಜನವರಿ 2018, 6:27 IST
ಹೊನ್ನಾಳಿ ಪಟ್ಟಣದಲ್ಲಿ ಜನವರಿ 14 ಮತ್ತು 15 ರಂದು ನಡೆಯಲಿರುವ ಶ್ರೀ ಗುರು ಸಿದ್ಧರಾಮೇಶ್ವರರ ಜಯಂತ್ಯುತ್ಸವದ ಸಿದ್ಧತೆಗಳನ್ನು ಸ್ವಾಗತ ಸಮಿತಿಯ ತಾಲ್ಲೂಕು ಕಮಿಟಿ ಪದಾಧಿಕಾರಿಗಳು ಪರಿಶೀಲಿಸಿದರು.
ಹೊನ್ನಾಳಿ ಪಟ್ಟಣದಲ್ಲಿ ಜನವರಿ 14 ಮತ್ತು 15 ರಂದು ನಡೆಯಲಿರುವ ಶ್ರೀ ಗುರು ಸಿದ್ಧರಾಮೇಶ್ವರರ ಜಯಂತ್ಯುತ್ಸವದ ಸಿದ್ಧತೆಗಳನ್ನು ಸ್ವಾಗತ ಸಮಿತಿಯ ತಾಲ್ಲೂಕು ಕಮಿಟಿ ಪದಾಧಿಕಾರಿಗಳು ಪರಿಶೀಲಿಸಿದರು.   

ಹೊನ್ನಾಳಿ: ಶ್ರೀ ಗುರು ಸಿದ್ಧರಾಮೇಶ್ವರರ 845 ನೇ ರಾಜ್ಯ ಮಟ್ಟದ ಜಯಂತ್ಯುತ್ಸವ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಜ.14 ಮತ್ತು 15 ರಂದು ನಡೆಯಲಿದ್ದು, ಅದಕ್ಕಾಗಿ ಪಟ್ಟಣದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ಪೆಂಡಾಲ್: ಸುಮಾರು 350 ಅಡಿ ಉದ್ದದ 200 ಅಡಿ ಅಗಲದ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. 80x30 ಅಡಿ ಉದ್ದದ ವೇದಿಕೆ ಸಿದ್ದಪಡಿಸಲಾಗಿದ್ದು, ಗಣ್ಯರಿಗೆ 80x40 ಆಸನ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ 15 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಜಿ.ರುದ್ರೇಗೌಡ ತಿಳಿಸಿದರು.

50 ಊಟದ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜ.14ರಂದು ಬೆಳಿಗ್ಗೆ 8.30ಕ್ಕೆ ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಿಂದ ಸ್ವಾಗತ ಸಮಿತಿಯು ಮೆರವಣಿಗೆ ಹೊರಡಲಿದೆ. ಅಲ್ಲಿಂದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣದ ಮೂಲಕ ಪಟ್ಟಣದ ಮೃತ್ಯುಂಜಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವ್ಯವಸ್ಥೆಗೊಳಿಸಿರುವ ವೇದಿಕೆಗೆ ಬರಲಿದೆ.

ADVERTISEMENT

ನಂತರ ಕಾರ್ಯಕ್ರಮಗಳು ಜರುಗಲಿವೆ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಮಾಜಿ ಸಚಿವರು, ಸಮಾಜದ ಮುಖಂಡರು ಹಾಗೂ ಶಾಸಕರು, ಗಣ್ಯರು ಕೂರುವ ವೇದಿಕೆ ಸಿದ್ಧಗೊಳ್ಳುತ್ತಿದೆ.

ಎರಡು ಲಕ್ಷಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ.ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ಜ.14ರಂದು ಬೆಳಿಗ್ಗೆ ತಿಂಡಿಗೆ ಟೊಮೆಟೊ ಬಾತ್, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅನ್ನ ಸಾಂಬಾರು, ಜ. 15 ರ ಬೆಳಿಗ್ಗೆ ಕೇಸರಿ ಬಾತ್, ಉಪ್ಪಿಟ್ಟು ಹಾಗೂ ಇಡ್ಲಿ ಸಾಂಬಾರ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಮೋಹನ್ ಕುಮಾರ್ ತಿಳಿಸಿದ್ದಾರೆ.

ವೇದಿಕೆಯ ಹೊರಭಾಗದಲ್ಲಿ ವಸ್ತು ಪ್ರದರ್ಶನಗಳು, ಸ್ಟಾಲ್ ಗಳನ್ನು ತೆರೆಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಾಪೂಗೌಡ ಪಾಟೀಲ್, ಎಪಿಎಂಸಿ ನಿರ್ದೇಶಕರಾದ ಸೋಮಣ್ಣ, ಸುರೇಶ್ ಕೆಂಚಿಕೊಪ್ಪ, ಮುಖಂಡರಾದ ಬಲಮುರಿ ಶಿವಣ್ಣ, ನೇಮಿಚಂದ್ರಪ್ಪ, ಜಿ. ಶಂಕರಪ್ಪ, ಜಿ. ಈಶ್ವರಪ್ಪ ಗೌಡ, ಬಸವರಾಜ್, ಮಲ್ಲಿಕಾರ್ಜುನ್ ಬಲಮುರಿ, ನಾಗರಾಜ್ ಮಾದೇನಹಳ್ಳಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.