ದಾವಣಗೆರೆ: ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಯನ್ನು ಪ್ಲಾಸ್ಮಾ ಫೇರೋಸಿಸ್ ಎಂಬ ಅಪರೂಪದ ಚಿಕಿತ್ಸೆಯ ಮೂಲಕ ದಾವಣಗೆರೆ ಬಾಪೂಜಿ ಆಸ್ಪತ್ರೆಯ ವೈದ್ಯರ ತಂಡ ಬದುಕಿಸಿದೆ.
ಚಿತ್ರದುರ್ಗದ ಮಹಿಳೆ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಪರೀತ ರಕ್ತದೊತ್ತಡ ಸಹಿತ ಹಲವು ಬದಲಾವಣೆಗಳು ಹೆರಿಗೆ ಸಂದರ್ಭದಲ್ಲಿ ಉಂಟಾಗಿತ್ತು. ಇದನ್ನು ಪೋಸ್ಟ್ ಪಾರ್ಟಮ್ ಟಿಎಂಎ ಎಂದು ಕರೆಯಲಾಗುತ್ತದೆ. ಇದರಿಂದ ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿದ್ದರಿಂದ ಮಹಿಳೆ ಪ್ರಾಣಾಪಾಯಕ್ಕೆ ಸಿಲುಕಿದ್ದರು.
‘ರಕ್ತದಲ್ಲಿರುವ ಪ್ಲಾಸ್ಮಾವನ್ನೇ ತೆಗೆದು ಬೇರೆ ಪ್ಲಾಸ್ಮಾ ನೀಡುವ ಪ್ಲಾಸ್ಮಾ ಫೇರೋಸಿಸ್ ಚಿಕಿತ್ಸೆಯನ್ನು ನೀಡಲಾಯಿತು. ಡಯಾಲಿಸೀಸ್ ಅಂದರೆ ರಕ್ತದ ಬದಲಾವಣೆ. ಇದು ರಕ್ತದಲ್ಲಿರುವ ಪ್ಲಾಸ್ಮಾವನ್ನೇ ಬದಲಾಯಿಸುವುದರಿಂದ ಇದನ್ನು ವಿಶೇಷ ಡಯಾಲಿಸೀಸ್ ಎಂದು ಕರೆಯಬಹುದು. ಈ ಚಿಕಿತ್ಸೆಯನ್ನು ಈ ಮಹಿಳೆಗೆ ಐದು ಬಾರಿ ಮಾಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗಿದ್ದಾರೆ’ ಎಂದು ಮೂತ್ರಪಿಂಡ ತಜ್ಞ ಡಾ. ಮೋಹನ್ ಆರ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರ ಇರುವ ಈ ಚಿಕಿತ್ಸೆ ಬಾಪೂಜಿ ಆಸ್ಪತ್ರೆಯಲ್ಲಿ ಬಡ, ಸಾಮಾನ್ಯ ಜನರಿಗೂ ನೀಡಲು ಆಸ್ಪತ್ರೆ ಆಡಳಿತ ಮಂಡಳಿಯ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ನಿರ್ಧರಿಸಿದ್ದರು. ಒಂದು ಬಾರಿಗೆ ₹ 35 ಸಾವಿರದಿಂದ ₹ 40 ಸಾವಿರ ವೆಚ್ಚವಾಗುತ್ತದೆ. ಆದರೆ ಬಾಪೂಜಿಯಲ್ಲಿ ಐದು ಬಾರಿ ಪ್ಲಾಸ್ಮಾ ಫೇರೋಸಿಸ್ ಚಿಕಿತ್ಸೆಯನ್ನು ₹ 50 ಸಾವಿರದ ಒಳಗೆ ನೀಡಲಾಗಿದೆ. ಡಾ. ಅಗರವಾಲ್, ಡಾ. ಜಗದೀಶ್ವರಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ವಿಜಯಲಕ್ಷ್ಮಿ ಮಲ್ಯ, ಡಾ. ಸಹನಾ ಜಿ.ವಿ. ಮತ್ತು ತಂಡದ ಸಹಕಾರದಿಂದ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ಡಾ. ಮೋಹನ್ ಆರ್. ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.