ಮಲೇಬೆನ್ನೂರು: ದೇವರಬೆಳೆಕೆರೆ ಪಿಕಪ್ ಜಲಾಶಯದ ಗೇಟುಗಳಿಗೆ ಜಲಸಸ್ಯ ಅಡ್ಡಲಾಗಿ ನಿಂತಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಶಾಶ್ವತ ಪರಿಹಾರ ಕಲ್ಪಿಸದ ಕಾರಣ ರೈತರು ಸಮಸ್ಯೆ ಎದುರಿಸುವಂತಾಗಿದೆ.
’ಜಲಸಸ್ಯ ತೆರವು ಸಂಬಂಧ ಈಗಾಗಲೇ ಎಂಜಿನಿಯರ್ಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮೈಸೂರಿನ
ಕೆಆರ್ಎಸ್ ಅಣೆಕಟ್ಟೆ ತಜ್ಞರು ವರದಿ ನೀಡುವ ತನಕ ಏನೂ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ಡಿಬಿ ಕೆರೆ ಪಿಕಪ್ ಗೇಟ್ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿದ್ದರೂ ಗೇಟ್ ತೆರವು ಮಾಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ರೈತ ಮುಖಂಡ ಸಂಕಲೀಪುರದ ಸಿ. ನಾಗೇಂದ್ರಪ್ಪ ಎಂದು ದೂರಿದರು.
‘ಒಮ್ಮೆ ಅಣೆಕಟ್ಟೆಯಲ್ಲಿ ಬಿರುಕು ಮೂಡಿ ಡ್ರಿಪ್ ಯೋಜನೆ ಅಡಿ ದುರಸ್ತಿ ಮಾಡಲಾಗಿದೆ. ಒಂದು ಪಾರ್ಶ್ವದ ಗೋಡೆಯಲ್ಲಿ ಚಿಕ್ಕ ಬಿರುಕು ಕಾಣಿಸಿಕೊಂಡಿದೆ. ನೀರಿನ ಒತ್ತಡದಿಂದಾಗಿ ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ಯಾರು ಹೊಣೆ’ ಎಂದು ಸಂಕ್ಲೀಪುರ, ಗುಳದಳ್ಳಿ, ಬೂದಿಹಾಳ್, ದೇವರಬೆಳಕೆರೆ, ಗ್ರಾಮದ ರೈತರು ಆತಂಕ ವ್ಯಕ್ತಪಡಿಸಿದರು.
ಈಗ ಮರಳು ಚೀಲ ಹಾಕಿ ಒತ್ತಡ ಹೆಚ್ಚಿಸಿ ಅಚ್ಚುಕಟ್ಟಿಗೆ ನಾಲೆಗೆ ನೀರು ಹರಿಸುತ್ತಿದ್ದಾರೆ. ಜಲಸಸ್ಯ ನೀರಿನ ಹರಿವಿಗೆ ಅಡ್ಡವಾಗಿ ನಿಂತಿದ್ದು, ಒಂದು ದೊಡ್ಡ ಮಳೆ ಬಂದರೆ ಹಿನ್ನೀರು ನುಗ್ಗಿ ಬೇಸಿಗೆ ಭತ್ತ ಬೆಳೆಯೂ ನೀರು ಪಾಲಾಗಿದೆ. ಬೇಸಿಗೆ ಕಾಮಗಾರಿ ನಡೆಸಲು ಸೂಕ್ತ ಸಮಯ. ಎಂಜಿನಿಯರ್ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.
ಗೇಟ್ ತೆರವು ಅಥವಾ ಹೊಸ ಗೇಟ್ ಅಳವಡಿಸುವ ಕುರಿತು ಕೆಆರ್ಎಸ್ ಎಂಜಿನಿಯರುಗಳ ತಂಡ ಪರಿಶೀಲನೆ ನಡೆಸಿ, ಜಿಪಿಎಸ್ ಆಧಾರಿತ ಸರ್ವೆ ನಡೆಸುತ್ತಿದೆ. ಶೀಘ್ರ ವರದಿ ಬರಲಿದೆ. ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ಚಂದ್ರಕಾಂತ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.