ದಾವಣಗೆರೆ: ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹12 ಸಾವಿರ ವೇತನ ನಿಗದಿಪಡಿಸಬೇಕು ಹಾಗೂ ಕೊರೊನಾ ಸೋಂಕಿನ ರಕ್ಷಣೆಗೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ನೀಡಬೇಕು ಎಂದು ಒತ್ತಾಯಿಸಿಎಐಡಿಎಸ್ಒ, ಎಐಡಿವೈಒ ಹಾಗೂಎಐಎಂಎಸ್ಎಸ್ ನೇತೃತ್ವದಲ್ಲಿಆಶಾ ಕಾರ್ಯಕರ್ತೆಯರು ಸೋಮವಾರ ಜಯದೇವ ವೃತ್ತದ ಎದುರು ಪ್ರತಿಭಟನೆ ನಡೆಸಿದರು.
ಹಳ್ಳಿಯ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸುವ ‘ಆಶಾ’ಗಳು ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತಿದ್ದು, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗಿ, ಚಿಕುನ್ಗುನ್ಯ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದಾರೆ.ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದಲ್ಲಿ ಸಮುದಾಯದ ಆರೋಗ್ಯಕರ ಬದಲಾವಣೆಗೆ ಹಗಲಿರುಳೆನ್ನದೇ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಮೊರೆ ಸರ್ಕಾರದ ಕಿವಿ ಮುಟ್ಟದೇ ಇರುವುದು ವಿಷಾದದ ಸಂಗತಿ’ ಎಂದು ಪ್ರತಿಭಟನಕಾರರು ಹೇಳಿದರು.
‘ಜುಲೈ 10ರಿಂದ ಕೆಲಸ ಸ್ಥಗಿತಗೊಳಿಸಿ ವಿವಿಧ ಮಾದರಿಯ ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕೆಲಸ ಸ್ಥಗಿತಗೊಳಿಸಿ 18 ದಿನಗಳು ಕಳೆದರೂ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಮಾತುಕತೆಗೆ ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.
ಎಐಡಿಎಸ್ಒನ ಜಿಲ್ಲಾ ಘಟಕದ ಅಧ್ಯಕ್ಷೆ ಸೌಮ್ಯ ಜಿ, ಎಐಡಿವೈಒನ ಮಧು ತೊಗಲೇರಿ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ, ಬ್ರೇಕ್ಥ್ರೋ ಸೈನ್ಸ್ ಸೊಸೈಟಿಯಸಂತೋಷ್ ಕುಮಾರ್, ರೈತ ಕೃಷಿ ಕಾರ್ಮಿಕ ಸಂಘಟನೆಯ ಬೀರಲಿಂಗಪ್ಪ ನೀರ್ತಡಿ, ಪರಶುರಾಮ, ಪುಷ್ಪಾ, ಮಮತಾ, ಧನುಷ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.