ದಾವಣಗೆರೆ: ‘ನಿಮ್ಮ ಹಣ ಬಿದ್ದಿದೆ’ ಎಂದು ಗಮನವನ್ನು ಬೇರೆಡೆಗೆ ಸೆಳೆದು ಬೈಕಲ್ಲಿದ್ದ ₹ 4 ಲಕ್ಷ ಹಣದ ಚೀಲವನ್ನು ಕಳವು ಮಾಡಲಾಗಿದೆ.
ಜರೆಕಟ್ಟೆಯ ಆಕಾಶ್ ರೈಸ್ ಮಿಲನ್ ಮಾಲೀಕ ಸುರೇಶ್ ಅವರು ಜರೆಕಟ್ಟೆಯ ಶ್ರೀಕಾಂತ ಅವರಿಗೆ ₹ 4 ಲಕ್ಷದ ಚೆಕ್ ಅನ್ನು ನೀಡಿ ನಗದು ಮಾಡಿಕೊಂಡು ಬರುವಂತೆ ಕಳುಹಿಸಿದ್ದರು. ದಾವಣಗೆರೆ ಹದಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಹಣವನ್ನು ಬಿಡಿಸಿಕೊಂಡು ಅದನ್ನು ಬಟ್ಟೆ ಚೀಲದಲ್ಲಿಟ್ಟಿದ್ದರು. ಆ ಚೀಲವನ್ನು ತನ್ನ ಬೈಕ್ ಹ್ಯಾಂಡಲ್ಗೆ ಸಿಕ್ಕಿಸಿಕೊಂಡು ಹೋಗುತ್ತಿದ್ದರು. ತರಳಬಾಳು ಬಡಾವಣೆಯ 4ನೇ ಕ್ರಾಸ್ ಬಳಿ ತಲುಪಿದಾಗ ‘ನಿಮ್ಮ ಹಣ ಬಿದ್ದಿದೆ’ ಎಂದು ಯಾರೋ ಇಬ್ಬರು ಅಪರಿಚಿತರು ಹೇಳಿ ಮುಂದಕ್ಕೆ ಹೋದರು. ಶ್ರೀಕಾಂತ್ ಬೈಕ್ ನಿಲ್ಲಿಸಿ ಬಂದು ನೋಡಿ ವಾಪಸ್ ಬೈಕ್ ಹತ್ತಿರ ಬಂದಾಗ ಹಣದ ಚೀಲವೇ ಕಳವಾಗಿತ್ತು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.