ADVERTISEMENT

ನೆಹರು ಓಲೇಕಾರ್ ಕ್ಷಮೆಯಾಚನೆಗೆ ಬಂಜಾರ ಸಮಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 16:07 IST
Last Updated 11 ನವೆಂಬರ್ 2020, 16:07 IST

ದಾವಣಗೆರೆ: ‘ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿರುವ ಶಾಸಕ ನೆಹರು ಓಲೇಕಾರ್ ಅವರು ಕೂಡಲೇ ಸಮಾಜದವರ ಕ್ಷಮೆ ಯಾಚಿಸಬೇಕು. ಅಲ್ಲದೇ ರಾಜೀನಾಮೆ ನೀಡಬೇಕು’ ಎಂದು ಬಂಜಾರ ಸಮಾಜದ ಮುಖಂಡ ನಂಜಾ ನಾಯ್ಕ ಆಗ್ರಹಿಸಿದರು.

‘ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಎಂಬವರನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ರುದ್ರಪ್ಪ ಲಮಾಣಿ ಅವರು ‘ಮಹಿಳೆಯರನ್ನು ಮಾರಾಟ ಮಾಡುತ್ತಿದ್ದರು’ ಎಂದು ಹೇಳುವ ಮೂಲಕ ನಮ್ಮ ಸಮುದಾಯದ ಸಜ್ಜನ ರಾಜಕಾರಣಿಯ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಓಲೇಕಾರ್ ಅವರು ನಮ್ಮ ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವಮಾನ ಮಾಡುತ್ತಿದ್ದಾರೆ. ಇದು ಸರಿಯ‌ಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದರು.

‘ರುದ್ರಪ್ಪ ಲಮಾಣಿ ಅವರ ಬಗ್ಗೆ ರಾಜಕೀಯ ದ್ವೇಷವಿದ್ದರೆ ಅವರನ್ನೇ ಗುರಿಯಾಗಿಸಿಕೊಂಡು ಮಾತನಾಡಲಿ. ಆದರೆ ನಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳ ಮಾರಾಟ ಮಾಡಿದ್ದರೆ ದಾಖಲೆ ನೀಡಲಿ. ನಾವೇ ಅವರನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತೇವೆ. ಅದನ್ನು ಬಿಟ್ಟು ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ನೆಹರು ಓಲೇಕಾರ್ ಅವರ ಹೇಳಿಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ಲಮಾಣಿ ಅವರನ್ನು ಒತ್ತಾಯಿಸುತ್ತೇವೆ. ಅಲ್ಲದೇ ಸಮಾಜದ ಮುಖಂಡರು ಒಟ್ಟಾಗಿ ಸೇರಿ ಓಲೇಕಾರ್ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡುತ್ತೇವೆ. ಕೂಡಲೇನೆಹರು ಓಲೇಕಾರ್ ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಸಮುದಾಯದ ಮುಖಂಡರಾದ ನಾಗಾರಾಜ ನಾಯ್ಕ ಸೋಮ್ಲಾಪುರ, ಶೀತಲ್, ರವಿನಾಯ್ಕ, ಬಸವರಾಜನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.