ಸಂತೇಬೆನ್ನೂರು: ಮಗು ಹುಟ್ಟಿದಂದಿನಿಂದ ಕನಿಷ್ಠ ಎರಡು ವರ್ಷ ಎದೆಹಾಲು ಉಣಿಸಬೇಕು. ಇದು ಮಗುವಿನ ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಡಾ.ದುರ್ಗಾ ಶಿರಿನ್ ಸಲಹೆ ನೀಡಿದರು.
ಇಲ್ಲಿನ ಸಮುದಾಯ ಆರೋಗ್ಯ ಕೆಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗು ಹುಟ್ಟುವ ಮುನ್ನವೇ ಎದೆಹಾಲುಣಿಸುವ ಬಗ್ಗೆ ತಾಯಿ ತಿಳಿವಳಿಕೆ ಪಡೆಯಬೇಕು. ಇದರಿಂದ ಮಗು, ತಾಯಿ ಇಬ್ಬರಿಗೂ ಉಪಯೋಗ. ಸಹಜ ಪ್ರಸವದ ಅರ್ಧ ಗಂಟೆಯೊಳಗೆ ಹಾಲುಣಿಸಬಹುದು. ಶಸ್ತ್ರಚಿಕಿತ್ಸೆ ಪ್ರಸವವಾದಾಗ 1 ಗಂಟೆಯೊಳಗೆ ಹಾಲುಣಿಸಬೇಕು. ಜೇನುತುಪ್ಪ ನೆಕ್ಕಿಸುವುದು ಅಪಾಯಕಾರಿ. 6 ತಿಂಗಳವರೆಗೆ ಎದೆಹಾಲು ಮಗುವಿನ ಆಹಾರ. ಪೌಡರ್ ಹಾಲಿನಿಂದ ಪ್ರಯೋಜನ ಇಲ್ಲ ಎಂದರು.
ಮಗು ಹುಟ್ಟಿದ 6 ದಿನದ ನಂತರ ದಿನಕ್ಕೆ 6ರಿಂದ 8 ಸಲ ಮೂತ್ರ ಮಾಡಿದರೆ ಸಂತೃಪ್ತ ಹಾಲು ಕುಡಿದಿದೆ ಎಂದು ಅರಿಯಬೇಕು. ಎಷ್ಟು ಸಲ ಹಾಲು ಕುಡಿಸಿದರೂ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತಾಯಿಗೆ ರಕ್ತಸ್ರಾವ ಕಡಿಮೆ ಆಗುತ್ತದೆ. ತೂಕ ಇಳಿಯುತ್ತದೆ. ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಡಾ.ಸುಧಾ ಮಾತನಾಡಿ, ‘ಪ್ರಸವ ಪೂರ್ವ ಹಾಗೂ ಪ್ರಸವದ ನಂತರ ಪೌಷ್ಟಿಕ ಆಹಾರ ತಿನ್ನಬೇಕು. ಸೊಪ್ಪು, ತರಕಾರಿಯನ್ನು ಹೇರಳವಾಗಿ ಬಳಸಬೇಕು. ಕರಿದ ಪದಾರ್ಥ ಬೇಡ. ಮೊಟ್ಟೆ, ಮೀನು, ಮಾಂಸ ತಿನ್ನಬಹುದು ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸದಸ್ಯರಾದ ಆಸಿಫ್, ವಸಂತ ಪ್ರಸನ್ನಗೌಡರ್, ರಹಮತ್ ಉಲ್ಲಾ, ಮಂಜಾನಾಯ್ಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.