ADVERTISEMENT

ದಾವಣಗೆರೆ: ಪಲ್ಸರ್ ಬೈಕ್‌ನಲ್ಲಿ ಬಂದು ನಗರದ ಮೂರು ಕಡೆ ಸರಗಳ್ಳತನ

ಮಾಸ್ಕ್ ಧರಿಸಿ ಬಂದ ಕಳ್ಳರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 16:29 IST
Last Updated 13 ಜುಲೈ 2020, 16:29 IST

ದಾವಣಗೆರೆ: ನಗರದ ಮೂರು ಕಡೆಗಳಲ್ಲಿ ಸೋಮವಾರ ಸರಣಿ ಸರಗಳ್ಳತನ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬರು ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಶಿವಮೊಗ್ಗದ ಶಿವಕುಮಾರಸ್ವಾಮಿ ಬಡಾವಣೆಯ ಗಾಯಿತ್ರಿ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನಕ್ಕೆ ಸಿದ್ದಗಂಗಾ ಶಾಲೆಗೆ ಹಿಂಭಾಗದ ರಸ್ತೆಯಲ್ಲಿ ಸ್ನೇಹಿತೆ ದೀಪಾ ಎಂಬವರ ಜೊತೆ ತೆರಳುತ್ತಿದ್ದಾಗ ಪಲ್ಸರ್‌ ಬೈಕ್‌ನಲ್ಲಿ ಬಂದ ಯುವಕರಿಬ್ಬರು 5ಗ್ರಾಂ ತೂಕದ ₹15 ಸಾವಿರ ಮೌಲ್ಯದ ಸರ ಕಿತ್ತು ಪರಾರಿಯಾಗಿದ್ದಾರೆ.

ಚನ್ನಗಿರಿ ತಾಲ್ಲೂಕು ಮಾವಿನ ಹೊಳೆ ಗ್ರಾಮದಲ್ಲಿ ಮಹಾರುದ್ರ ಸ್ವಾಮಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕಾಗಿ ಹೊನ್ನಾಳಿಯ ತಾಯಿಯ ಮನೆಯಿಂದ ದಾವಣಗೆರೆಗೆ ಬಂದಿದ್ದರು.

ADVERTISEMENT

‘ಕಳ್ಳರು ಕಮ್ಯಾಂಡೊ ಕ್ಯಾಪ್ ಹಾಗೂ ಮಾಸ್ಕ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿಟ್ಟುವಳ್ಳಿ ಆದರ್ಶ ಸ್ಕೂಲ್ ಮುಂಬಾಗ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಕೆಟಿಜೆ ನಗರದ 17ನೇ ಕ್ರಾಸ್‌ ನಿವಾಸಿ ಗೀತಾ ಅವರು ಸಿದ್ದಗಂಗಾ ಶಾಲೆ ಹಿಂಭಾಗದ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಸರ ಕಸಿದು ಪರಾರಿಯಾಗಿದ್ದಾರೆ. ಈ ಎರಡು ಪ್ರಕರಣಗಳು ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಮತ್ತೊಂದು ಪ್ರಕರಣದಲ್ಲಿ ಎಸ್.ಎಸ್.ಲೇ ಔಟ್ ‘ಎ‘ ಬ್ಲಾಕ್ ಬಳಿ ಇರುವ ಅಂಗವಿಕಲರ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ಶಾಲೆಯ ಶಿಕ್ಷಕಿ ಯಶೋಧಮ್ಮ ಅವರು ಎಸ್‌ಎಸ್ ಮಾಲ್‌ನಿಂದ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

4 ಮತ್ತು 1 ತೊಲದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು ಹೋಗಿದ್ದು, ಇವುಗಳ ಮೌಲ್ಯ ₹1.50 ಲಕ್ಷವಾಗುತ್ತದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.