ADVERTISEMENT

ಹವಾಮಾನ ವೈಪರಿತ್ಯ: ಮುಖ್ಯಮಂತ್ರಿ ಪ್ರವಾಸ ರದ್ದು

ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 16:41 IST
Last Updated 23 ಅಕ್ಟೋಬರ್ 2020, 16:41 IST

ದಾವಣಗೆರೆ: ‘ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಸಂಘಟಿತರಾಗಿ ಚುನಾವಣೆ ಎದುರಿಸುತ್ತಿದ್ದು, ಚುನಾವಣೆಯ ಜವಾಬ್ದಾರಿಗಳನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರ‍ಪ್ಪ ಪ್ರಚಾರ ನಡೆಸಿದರೆ ಹೆಚ್ಚಿನ ಹುರುಪು ಬರಲಿದೆ’ ಎಂದುಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 9 ಸಾವಿರ, ದಕ್ಷಿಣ ಕ್ಷೇತ್ರದಲ್ಲಿ 3,600, ಮಾಯಕೊಂಡ 3,000, ಹರಿಹರ 4160, ಜಗಳೂರು ಕ್ಷೇತ್ರದಲ್ಲಿ 1900 ಸೇರಿ ಸುಮಾರು 20 ಸಾವಿರ ಮತದಾರರು ಇದ್ದಾರೆ. ಕೊರೊನಾ ಕಾರಣದಿಂದ ನೋಂದಣಿ ಕಡಿಮೆಯಾಗಿದೆ’ ಎಂದರು.

‘ಬಿಜೆಪಿಯಲ್ಲಿ ಒಬ್ಬರು ಬಿಟ್ಟರೆ ಬೇರೆ ಯಾವುದೇ ಬಂಡಾಯವಿಲ್ಲ. ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಹಾಲನೂರು ಲೇಪಾಕ್ಷ ಅವರ ಜೊತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತುಕತೆ ನಡೆಸುತ್ತಾರೆ. ಬಂಡಾಯವೆದ್ದಿರುವವರ ಪರ ಯಾರೂ ಪ್ರಚಾರ ನಡೆಸುತ್ತಿಲ್ಲ. ಎಲ್ಲರೂ ಪಕ್ಷಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಜಾತಿಯನ್ನು ನಂಬಿ ರಾಜಕೀಯ ಮಾಡುತ್ತಿಲ್ಲ’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಎಚ್.ಎಸ್‌.ಶಿವಯೋಗಿಸ್ವಾಮಿ ಮಾತನಾಡಿ, ‘ಆಗ್ನೇಯ ಪದವೀಧರರ ಕ್ಷೇತ್ರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆ. ಯಾವುದೇ ಪಕ್ಷಗಳಲ್ಲೂ ಜಿಲ್ಲೆಯ ಅಭ್ಯರ್ಥಿಗಳು ಇಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಶಕ್ತಿ ಜಾಸ್ತಿ ಇರುತ್ತದೋ ಆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ. ಮತದಾರರು ಪ್ರಬುದ್ಧರಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಕೆಲಸ ಸುಲಭವಾಗುತ್ತದೆ ಎಂಬ ಭಾವನೆ ಜನರಲಿದ್ದು, ಇದರಿಂದ ಬಿಜೆಪಿ ಹೆಚ್ಚಿನ ಲಾಭವಾಗಲಿದೆ’ ಎಂದರು.

ಮುಖಂಡರಾದ ಡಿ.ಎಸ್. ಶಿವಶಂಕರ್, ಕೆ.ಎಂ.ಸುರೇಶ್, ಎಚ್.ಎಸ್.ಲಿಂಗರಾಜು ಇದ್ದರು.

ಮುಖ್ಯಮಂತ್ರಿ ಪ್ರವಾಸ ರದ್ದು

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜಿಲ್ಲೆಯ ಪ್ರವಾಸ ರದ್ದಾಗಿದೆ.
ಹೆಲಿಕಾಪ್ಟರ್ ಮೂಲಕ ಶನಿವಾರ ಜಿಲ್ಲೆಗೆ ಬರಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.