ದಾವಣಗೆರೆ: ಉತ್ತರ ಪ್ರದೇಶದಲ್ಲಿ ಈಚೆಗೆ ನಡೆದ ದಲಿತ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ದೌರ್ಜನ್ಯ ಮಾಡಿ ಬಂಧಿಸಿರುವುದನ್ನು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಖಂಡಿಸಿದ್ದಾರೆ.
ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳನ್ನು ಉತ್ತರ ಪ್ರದೇಶ ಸರ್ಕಾರ ರಕ್ಷಿಸುತ್ತಿದೆ. ಯುವತಿಯ ಶವಸಂಸ್ಕಾರದ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸದೆ ನಡು ರಾತ್ರಿಯಲ್ಲಿ ಮಾಡಿದೆ. ಆ ಕುಟುಂಬದ ಮನೆಗೆ ರಾಹುಲ್ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ವಾಹನವನ್ನು ತಡೆ ಹಿಡಿದಿದ್ದಾರೆ. ಕಾಲು ನಡಿಗೆಯಲ್ಲಿ ಹೋಗಲೂ ಅವಕಾಶ ನೀಡಿಲ್ಲ. ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ. ಲಾಠಿಚಾರ್ಜ್ ಮಾಡಲಾಗಿದೆ. ಬಳಿಕ ಬಂಧಿಸಿದ್ದಾರೆ. ಇದು ಸರ್ವಾಧಿಕಾರಿ ಆಡಳಿತವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋನಿಯಾ ಗಾಂದಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗಿದ್ದ ಎಸ್ಪಿಜಿ ಭದ್ರತೆಯನ್ನು ರದ್ದುಗೊಳಿಸಿ ರಕ್ಷಣೆ ಸಿಗದಂತೆ ಮಾಡುವ ಮೋದಿ ಸರ್ಕಾರ ಹುನ್ನಾರ ನಡೆಸಿದೆ. ಒಬ್ಬ ಬಾಲಿವುಡ್ ನಟಿಗೆ ನೀಡುವ ಭದ್ರತೆಯನ್ನು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕುಟುಂಬದ ಸದಸ್ಯರಿಗೆ ನೀಡದೆ ಇರುವುದು ಧ್ವೇಷ ರಾಜಕಾರಣಕ್ಕೆ ಸಾಕ್ಷಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.