ದಾವಣಗೆರೆ: ಇಲ್ಲಿನ ಜಯದೇವ ವೃತ್ತದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯು ದೇಶದ ಮಧ್ಯಮ ವರ್ಗ ಮತ್ತು ಬಡ ಜನರ ವಿರೋಧಿಯಾಗಿದೆ. ಗ್ಯಾಸ್ ಸಬ್ಸಿಡಿಯನ್ನು ತೆಗೆಯುವ ಮೂಲಕ ಪ್ರಧಾನಿ ಮೋದಿ ಸರ್ಕಾರ ಬಡವರ ವಿರೋಧಿ ದೋರಣೆ ಅನುಸರಿಸಿದೆ. ಔಷಧಿ, ಚಿನ್ನ, ಬೆಳ್ಳಿ, ಗೊಬ್ಬರ, ಡೀಸೆಲ್, ಪೆಟ್ರೋಲ್ ಸೇರಿ ಎಲ್ಲದರ ಬೆಲೆಯನ್ನೂ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಧಾನಿ ಮೋದಿ ಅವರು ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಸಾರಿಗೆ ವೆಚ್ಚ, ವಿದ್ಯುತ್ ದರ, ಕೃಷಿ ವೆಚ್ಚ, ತರಕಾರಿ, ದಿನಸಿ ಬೆಲೆ, ಸಿಮೆಂಟ್, ಕಬ್ಬಿಣ ದರ ವಿಪರೀತ ಏರಿಕೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬೇಕು’ ಎಂದು ಹೇಳಿದರು.
‘ರಾಜ್ಯ ಸರ್ಕಾರ ₹4 ಹಾಲಿನ ದರವನ್ನು ಹೆಚ್ಚಿಸಿ, ಅದನ್ನು ನೇರವಾಗಿ ರೈತರ ಜೇಬಿಗೆ ಹಾಕುತ್ತಿದೆ. ಇದರಲ್ಲಿ ನಯಾಪೈಸೆಯೂ ಸರ್ಕಾರದ ಖಜಾನೆಗೆ ಬರುವುದಿಲ್ಲ. ಬಿಜೆಪಿ ಯಾವ ಮುಖವಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುತ್ತಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಪ್ರಶ್ನಿಸಿದರು.
‘ಇಂಧನ, ರಸಗೊಬ್ಬರ, ಪೆಟ್ರೋಲ್ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಕೇಂದ್ರದ ಬಿಜೆಪಿ ಸರ್ಕಾರವೇ ಕಾರಣ. ಜನಾಕ್ರೋಶ ಏನಿದ್ದರೂ, ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಬೇಕೇ ಹೊರತು; ಬೆಲೆ ಏರಿಕೆ ತಗ್ಗಿಸಲು ಗ್ಯಾರಂಟಿ ಯೋಜನೆ ಕೊಟ್ಟ ಕಾಂಗ್ರೆಸ್ ವಿರುದ್ಧವಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ಮೈನುದ್ದೀನ್, ಮಲ್ಲಿಕಾರ್ಜುನ್ ಜವಳಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಎ.ನಾಗರಾಜ್, ಅಬ್ದುಲ್ ಲತೀಫ್, ಆರ್.ಎಚ್.ನಾಗಭೂಷಣ್, ಪಾಮೇನಹಳ್ಳಿ ನಾಗರಾಜ್, ಸುರಭಿ ಶಿವಮೂರ್ತಿ, ಎಲ್.ಡಿ.ಗೋಣೆಪ್ಪ, ಸೋಮ್ಲಾಪುರ ಹನುಮಂತಪ್ಪ, ಜಯಣ್ಣ, ಸೇವಾದಳದ ಶಿವಕುಮಾರ್, ಡೋಲಿ ಚಂದ್ರು, ರಾಘವೇಂದ್ರ ಗೌಡ, ಕೊಡಪಾನ ದಾದಾಪೀರ್, ವರುಣ್ ನಾಯಕ್, ಪ್ರವೀಣ್, ಟಿ.ರಮೇಶ್, ರಂಗನಾಥಸ್ವಾಮಿ, ಅಲಿ ರೆಹಮತ್, ಗೋಪಿನಾಯ್ಕ, ಕೇರಂ ಗಣೇಶ್, ಎಲ್.ಬಿ.ಹನುಮಂತಪ್ಪ, ಹರೀಶ್, ರಾಕೇಶ್, ಮಂಗಳಮ್ಮ, ಮಂಜಮ್ಮ, ರಾಜೇಶ್ವರಿ, ದ್ರಾಕ್ಷಾಯಣಮ್ಮ, ಶುಭಮಂಗಳ, ಸುಮಿತ್ರಾ ಲೋಕೇಶ್, ರಾಧಾಬಾಯಿ, ಜಯಮ್ಮ, ಕಾವ್ಯಾ, ಗೀತಾ ಚಂದ್ರಶೇಖರ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.