ದಾವಣಗೆರೆ: 95 ವರ್ಷದವರು ಸೇರಿ 17 ವೃದ್ಧೆಯರು, 27 ವೃದ್ಧರು ಒಳಗೊಂಡಂತೆ ಒಟ್ಟು 218 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.
ಹೊನ್ನಾಳಿ ತಾಲ್ಲೂಕು ದುರ್ಗಿಗುಡಿಯ 60 ವರ್ಷದ ವೃದ್ಧೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕವಲೆತ್ತಿನ 72 ವರ್ಷದ ವೃದ್ಧ ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆಯಿಂದ ಶನಿವಾರ ಮೃತಪಟ್ಟಿದ್ದಾರೆ. ದಾವಣಗೆರೆ ಅಗಸನಕಟ್ಟೆಯ 80 ವರ್ಷದ ವೃದ್ಧೆ ಉಸಿರಾಟದ ಸಮಸ್ಯೆಯಿಂದ ಶನಿವಾರ ಅಸುನೀಗಿದ್ದಾರೆ. ಈ ಮೂವರಿಗೂ ಕೊರೊನಾ ಇರುವುದು ಖಚಿತವಾಗಿದೆ.
1 ವರ್ಷದ ಇಬ್ಬರು ಸೇರಿ 8 ಬಾಲಕರು, 11 ಬಾಲಕಿಯರಿಗೆ ಕೊರೊನಾ ಬಂದಿದೆ. 18ರಿಂದ 59 ವರ್ಷದೊಳಗಿನ 92 ಪುರುಷರಿಗೆ, 63 ಮಹಿಳೆಯರಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 97 ಪ್ರಕರಣಗಳು ಕಂಡು ಬಂದಿವೆ. ದೊಡ್ಡಬಾತಿ, ಕೋಡಿಹಳ್ಳಿ, ಆಲೂರಹಟ್ಟಿಯ ತಲಾ ಮೂವರು, ಆನಗೋಡು, ಆಲೂರಿನ ತಲಾ ಇಬ್ಬರು, ಕೊಡಗನೂರು, ಕಕ್ಕರಗೊಳ್ಳ, ಎಲೆಬೇತೂರು, ಕೊರೊಚರಹಟ್ಟಿ, ಚಿಕ್ಕತೊಗಲೇರಿ, ಕಬ್ಬೂರು, ಮಾಯಕೊಂಡ, ಹೊನ್ನಮರಡಿ, ಎಂಬಿ ಕೆರೆ, ಮೆಳ್ಳಕಟ್ಟೆ, ಕುಕ್ಕವಾಡದ ತಲಾ ಒಬ್ಬರು ಹೀಗೆ 24 ಮಂದಿ ತಾಲ್ಲೂಕಿನ ಗ್ರಾಮೀಣ ಪ್ರದೇಶದವರಾಗಿದ್ದಾರೆ. ಉಳಿದ 73 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ನಲ್ಲಿರುವ ಐವರಿಗೆ ಸೋಂಕು ಬಂದಿದೆ. ಬಾಪೂಜಿ ಹುಡುಗರ ವಸತಿ ನಿಲಯದ ಒಬ್ಬರು, ಡೆಂಟಲ್ ಕಾಲೇಜಿನ ಸಿಬ್ಬಂದಿ, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸಿಬ್ಬಂದಿ, ಉತ್ತರ ಠಾಣೆಯ ಒಬ್ಬ ಪೊಲೀಸ್ಗೂ ಕೊರೊನಾ ಬಂದಿದೆ.
ಹೊನ್ನಾಳಿ–ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 47, ಹರಿಹರ ತಾಲ್ಲೂಕಿನಲ್ಲಿ 30, ಚನ್ನಗಿರಿ ತಾಲ್ಲೂಕಿನಲ್ಲಿ 25 ಮತ್ತು ಜಗಳೂರು ತಾಲ್ಲೂಕಿನಲ್ಲಿ 9 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮೂವರಿಗೆ, ಸಂಡೂರಿನ ಒಬ್ಬರಿಗೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮೂವರಿಗೆ, ಚಿತ್ರದುರ್ಗದ ಇಬ್ಬರಿಗೆ ಹಾಗೂ ಹುಬ್ಬಳ್ಳಿಯ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.
109 ಮಂದಿ ಬಿಡುಗಡೆ:
9 ಮಂದಿ ವೃದ್ಧರು, 6 ಮಂದಿ ವೃದ್ಧೆಯರು, ಮೂವರು ಬಾಲಕಿಯರು, ಒಬ್ಬ ಬಾಲಕ ಸೇರಿ 109 ಮಂದಿ ಕೊರೊನಾ ಮುಕ್ತರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5,288ಕ್ಕೇರಿದೆ. ಅದರಲ್ಲಿ 3,530 ಮಂದಿ ಗುಣಮುಖರಾಗಿದ್ದಾರೆ. 129 ಮಂದಿ ಮೃತಪಟ್ಟಿದ್ದಾರೆ. 1,629 ಸಕ್ರಿಯ ಪ್ರಕರಣಗಳಿವೆ. 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.