ADVERTISEMENT

ಮುಖ್ಯಮಂತ್ರಿಯಿಂದ ಆಮ್ಲಜನಕ ಘಟಕ ಉದ್ಘಾಟನೆ: ಶಾಸಕ ರೇಣುಕಾಚಾರ್ಯ

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 4:58 IST
Last Updated 30 ಜೂನ್ 2021, 4:58 IST
ಹೊನ್ನಾಳಿಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೇಣುಕಾಚಾರ್ಯ ದಂಪತಿ ದೋಸೆ ಹೊಯ್ದು ಕೊರೊನಾ ಸೋಂಕಿತರಿಗೆ ಉಣಬಡಿಸಿದರು.
ಹೊನ್ನಾಳಿಯ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೇಣುಕಾಚಾರ್ಯ ದಂಪತಿ ದೋಸೆ ಹೊಯ್ದು ಕೊರೊನಾ ಸೋಂಕಿತರಿಗೆ ಉಣಬಡಿಸಿದರು.   

ಹೊನ್ನಾಳಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಮ್ಲಜನಕ ಘಟಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಲೇ ಉದ್ಘಾಟನೆ ಮಾಡಿಸಲು ತೀರ್ಮಾನಿಸಿದ್ದು, ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ನಿಮಿಷಕ್ಕೆ 510 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವನ್ನು ಘಟಕ ಹೊಂದಿದ್ದು, ಏಕ ಕಾಲದಲ್ಲಿ 100 ಜನರಿಗೆ ಆಮ್ಲಜನಕ ನೀಡಬಹುದು ಎಂದು ತಿಳಿಸಿದರು.

ADVERTISEMENT

ದೇಶದ ಅಭಿವೃದ್ಧಿಯಲ್ಲಿ ಯುವಕರದು ಸಿಂಹಪಾಲು ಇರುವುದರಿಂದ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ಅದಕ್ಕಾಗಿ ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು. ಯಾರೂ ಉದಾಸೀನ ಮಾಡಬಾರದು ಎಂದು ಮನವಿ ಮಾಡಿದರು.

ದೋಸೆ ಹೊಯ್ದ ರೇಣುಕಾಚಾರ್ಯ: ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೋಂಕಿತರಿಗೆ ಕರ್ನಾಟಕ ರಾಜ್ಯ ಅಡುಗೆ ಕೆಲಸ ಮಾಡುವವರು ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಸಂಘದವರು ದೋಸೆ ಉಪಾಹಾರದ ವ್ಯವಸ್ಥೆ ಮಾಡಿದ್ದರು. ರೇಣುಕಾಚಾರ್ಯ ದಂಪತಿ ಖುದ್ದು ದೋಸೆ ಹೊಯ್ದು ಸೋಂಕಿತರಿಗೆ ಉಣಬಡಿಸಿದರು.

ಚಟ್ನಳ್ಳಿ ಗ್ರಾಮದಿಂದ ಊಟದ ವ್ಯವಸ್ಥೆ: ಚಟ್ನಳ್ಳಿ ಗ್ರಾಮಸ್ಥರು ರೊಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ ಎಚ್. ಎತ್ತಿನಹಳ್ಳಿ, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಸದಸ್ಯರಾದ ರಂಗನಾಥ್, ಬಾಬು ಹೋಬಳದಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಮುಖಂಡ ನವೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.