ದಾವಣಗೆರೆ: ಜಿಲ್ಲೆಯಲ್ಲಿ 74 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ. 116 ಮಂದಿ ಗುಣಮುಖರಾಗಿದ್ದಾರೆ.
9 ಮಂದಿ ವೃದ್ಧರು, ಆರು ವೃದ್ಧೆಯರು, ಒಂದು ವರ್ಷದ ಮಗು ಸೇರಿ ಇಬ್ಬರು ಬಾಲಕರು, ಮೂವರು ಬಾಲಕಿಯರಿಗೆ ಕೊರೊನಾ ಬಂದಿದೆ.
14 ಮಂದಿ ವೃದ್ಧರು, 90 ವರ್ಷದವರು ಸೇರಿ 10 ವೃದ್ಧೆಯರು, 9 ಬಾಲಕರು, ಒಂದು ವರ್ಷದ ಮಗು ಸೇರಿ ಐವರು ಬಾಲಕಿಯರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 7 ಮಂದಿಗೆ ಕೊರೊನಾ ಬಂದಿದೆ ಎಂದು ಬುಲೆಟಿನ್ನಲ್ಲಿ ತೋರಿಸಲಾಗಿದೆ. ಬಾತಿ, ನಿಟುವಳ್ಳಿ ಮತ್ತು ವಿದ್ಯಾನಗರದ ಮೂವರಷ್ಟೇ ದಾವಣಗೆರೆಯವರು. ಉಳಿದಂತೆ ಹೂವಿನ ಹಡಗಲಿಯ ಒಬ್ಬರು, ಹರಿಹರ ತಾಲ್ಲೂಕಿನ ಭಾನುವಳ್ಳಿಯ ಇಬ್ಬರು, ಮಲೆಬೆನ್ನೂರಿನ ಒಬ್ಬರನ್ನು ದಾವಣಗೆರೆ ತಾಲ್ಲೂಕಿನವರು ಎಂದು ತೋರಿಸಲಾಗಿದೆ.
ಆರೋಗ್ಯ ಅಭಿಯಾನ ಕಾರ್ಯಕ್ರಮದ ಸಿಬ್ಬಂದಿ ಮುಷ್ಕರ ಹೂಡಿರುವುದರಿಂದ ಹಾಗೂ ತಾಂತ್ರಿಕ ದೋಷದಿಂದ ವಾಸ್ತವ ಸಂಖ್ಯೆ ದೊರೆತಿಲ್ಲ. ನಾಳೆಯಿಂದ ಸರಿಯಾಗಿ ಅಪ್ಲೋಡ್ ಆಗಲಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಸ್ಪಷ್ಟನೆ ನೀಡಿದ್ದಾರೆ.
ವಾಸ್ತವದಲ್ಲಿ ಭಾನುವಾರ ತೋರಿಸಲಾದ ಸೋಂಕಿತರ ಸಂಖ್ಯೆಗಿಂತ ದುಪ್ಪಟ್ಟು ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 42, ಹರಿಹರ ತಾಲ್ಲೂಕಿನಲ್ಲಿ 17, ಜಗಳೂರು ತಾಲ್ಲೂಕಿನಲ್ಲಿ 3 ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿಯ ಮೂವರು, ಚಿತ್ರದುರ್ಗದ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೆ 15,525 ಮಂದಿಗೆ ಸೋಂಕು ತಗುಲಿದೆ. 12,484 ಮಂದಿ ಗುಣಮುಖರಾಗಿದ್ದಾರೆ. 240 ಮಂದಿ ಮೃತಪಟ್ಟಿದ್ದಾರೆ. 2,801 ಸಕ್ರಿಯ ಪ್ರಕರಣಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.