ಜಗಳೂರು: ಡಿಡಿಸಿಸಿ ಬ್ಯಾಂಕ್ಗೆ ಇದೇ 30ರಂದು ನಡೆಯಲಿರುವ ಚುನಾವಣೆಗೆ ಪ್ರತಿನಿಧಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ ಮಂಗಳವಾರ ಪೊಲೀಸರು ಲಾಠಿ ಪ್ರಹಾರ ನಡಸಿರುವ ಘಟನೆ ನಡೆದಿದೆ.
ಗ್ರಾಮದ ವಿಎಸ್ಎಸ್ಎನ್ನ ವಾರ್ಷಿಕ ಸಭೆ ಮತ್ತು ಡಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಯನ್ನು ಸಭೆಯಲ್ಲಿ ಆಯ್ಕೆ ಮಾಡಬೇಕಿತ್ತು. ವಿಎಸ್ಎಸ್ಎನ್ ಸಮಿತಿಯ ನಿರ್ದೇಶಕರಲ್ಲಿ ಪ್ರತಿನಿಧಿಯ ಆಯ್ಕೆ ಮಾಡುವ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು.
ಗ್ರಾಮದಲ್ಲಿ ಇನ್ನೆರೆಡು ತಿಂಗಳ ನಂತರ ಮಾರಮ್ಮನ ಜಾತ್ರೆ ನಡೆಯಲಿದ್ದು, ಈ ಹಂತದಲ್ಲಿ ಗ್ರಾಮಸ್ಥರು ಮತ್ತು ಸಹಕಾರ ಸಂಘದಲ್ಲಿ ಒಡಕು ಮೂಡುವುದು ಬೇಡ. ಚುನಾವಣೆಗೆ ಯಾವ ಪ್ರತಿನಿಧಿಯನ್ನೂ ಆಯ್ಕೆ ಮಾಡುವುದು ಬೇಡ ಎಂದು ಗ್ರಾಮದ ಕೆಲವರ ಗುಂಪು ಸಂಘದ ಕಚೇರಿ ಎದುರು ಜಮಾಯಿಸಿ ಆಗ್ರಹಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಮುಂಜಾಗ್ರತೆಯಾಗಿ ಪೊಲೀಸರು ಸಂಘದ ಕಚೇರಿ ಸುತ್ತ ಗುಂಪುಗೂಡದಂತೆ ಎಚ್ಚರಿಕೆ ನೀಡಿದರು. ಇದನ್ನು ಲೆಕ್ಕಿಸದೆ ಜನರ ಗುಂಪು ಕಚೇರಿಯತ್ತ ಧಾವಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಗಾಯಗೊಂಡರು. ಡಿವೈಎಸ್ಪಿ ನಾಗೇಶ್ ಐತಾಳ್ ನೇತೃತ್ವದಲ್ಲಿ ಗ್ರಾಮದಲ್ಲಿ ಬಂದೋಬಸ್ತ್ ಒದಗಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.