ದಾವಣಗೆರೆ: ನಗರದಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಆರ್ಟಿಒ ಅಧಿಕಾರಿಗಳು ಹಲವು ವಾಹನಗಳಲ್ಲಿ ದೋಷಪೂರಿತ (ಡಿಫೆಕ್ಟಿವ್ ನಂಬರ್ ಪ್ಲೇಟ್) ನೋಂದಣಿ ಸಂಖ್ಯಾ ಫಲಕಗಳನ್ನು ತೆರವುಗೊಳಿಸಿ, ವಾಹನಗಳ ಮಾಲೀಕರಿಗೆ ದಂಡ ವಿಧಿಸಿದರು.
ಹೈಕೋರ್ಟ್ ಆದೇಶ ನೀಡಿರುವುದರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್ ನೇತೃತ್ವದಲ್ಲಿ ನಗರದ ಅರುಣಾ ಚಿತ್ರಮಂದಿರದ ಬಳಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 25ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ₹ 10 ಸಾವಿರಕ್ಕೂ ಹೆಚ್ಚು ದಂಡ
ವಿಧಿಸಿದರು.
ವಾಹನಗಳ ನೋಂದಣಿ ಸಂಖ್ಯಾ ಫಲಕದಲ್ಲಿ ನೋಂದಣಿ ಸಂಖ್ಯೆ ಹೊರತುಪಡಿಸಿ ಬೇರೆ ಯಾವುದೇ ಬರಹ ಇರಬಾರದು. ಆದರೆ ವಾಹನಗಳ ನಂಬರ್ ಪ್ಲೇಟ್ನಲ್ಲಿ ಸಂಸ್ಥೆಗಳ, ಹುದ್ದೆಗಳ ಹಾಗೂ ಇಲಾಖೆಗಳ ಹೆಸರುಗಳನ್ನು ಹಾಕಿಕೊಂಡು ಸಂಚರಿಸುವುದು ಕಂಡುಬಂದಿದೆ.
‘ವಾಹನಗಳ ನೋಂದಣಿ ಸಂಖ್ಯೆ ಹೊರತುಪಡಿಸಿ ಇನ್ಯಾವುದೇ ಬರಹ ಕಂಡು ಬಂದಲ್ಲಿ ಅದನ್ನು ತೆರವು
ಗೊಳಿಸಬೇಕು ಎಂದು ಕಳೆದ ಮಾರ್ಚ್ 12ರಂದು ಹೈಕೋರ್ಟ್ ಆದೇಶ ನೀಡಿದ್ದು, ಆದಕಾರಣ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ವಾಹನಗಳ ಮಾಲೀಕರು ಈ ಕೂಡಲೇ ದೋಷಪೂರಿತ ವಾಹನ ನೋಂದಣಿ ಸಂಖ್ಯಾ ಫಲಕವನ್ನು ತೆರವು ಮಾಡಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್ ಮನವಿ ಮಾಡಿದ್ದಾರೆ.
ಆರ್ಟಿಒ ಇನ್ಸ್ಪೆಕ್ಟರ್ಗಳಾದ ಪ್ರಮುತೇಶ್ ಹಾಗೂ ಹಿರಿಯ ವಾಹನ ನಿರೀಕ್ಷಕ ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.