ದಾವಣಗೆರೆ: ಕಬ್ಬು ಸೇರಿ ಕೃಷಿ ಉತ್ಪನ್ನಗಳ ವಿಷಯ ಕುರಿತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಆ.12ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಜಿ.ಎಸ್.ಟಿಯಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅವರು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
‘ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಜಿ.ಎಸ್.ಟಿಯನ್ನು ವಿಸ್ತರಿಸುವುದನ್ನು ನೋಡಿದರೆ ರೈತರ ಪ್ರತಿಭಟನೆಗೂ ಇದರ ಬಿಸಿ ತಟ್ಟುವ ಸಂಭವವಿದೆ. ಒಂದು ವೇಳೆ ಪ್ರತಿಭಟನೆಗೂ ಅನ್ವಯವಾಗಿ ಇಷ್ಟು ಪ್ರಮಾಣದ ಹಣ ಪಾವತಿಸಿ ಎಂದು ನೋಟಿಸ್ ಬಂದಲ್ಲಿ ಏನು ಮಾಡುವುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಅಡಿಕೆ ಹೊರತುಪಡಿಸಿ ಕೃಷಿಯ ಯಾವ ಉತ್ಪನ್ನಗಳಿಗೂ ಯೋಗ್ಯ ಬೆಲೆ ಸಿಗುತ್ತಿಲ್ಲ. ಅಕಾಲಿಕ ಮಳೆಯಿಂದ ಬಿತ್ತನೆ ಬೀಜಗಳು ಬಿಸಿಲು ಸಿಗದೇ, ಮೊಳಕೆ ಒಡೆಯದೇ ಮಣ್ಣಿನಲ್ಲೇ ಕೊಳೆತು ಹೋಗುತ್ತಿವೆ. ನಾಟಿ ಹಚ್ಚಿದ ಭತ್ತ ಉಳಿಯುತ್ತಿಲ್ಲ. ಹೊಸದಾಗಿ ನಾಟಿ ಮಾಡಲು ಅವಕಾಶವಾಗುತ್ತಿಲ್ಲ. ಸಂಕಷ್ಟದಲ್ಲಿರುವ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವವರು. ರೈತರಿಂದ ಜಿ.ಎಸ್.ಟಿ ಪಾವತಿಸಲು ಸಾಧ್ಯವಾಗದು. ರೈತರ ಸಂಕಷ್ಟ ಗಮನಿಸಿ ಪ್ರತಿಭಟನೆಯನ್ನು ಜಿಎಸ್ಟಿಯಿಂದ ಹೊರಗಿಡಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.