ದಾವಣಗೆರೆ: ರಾಜ್ಯ ಸರ್ಕಾರವು ಕೋವಿಡ್-19 ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದು, ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಂಡು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ವಕೀಲ ಅನೀಸ್ ಪಾಷಾ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈ ವರ್ಷ ಕೋವಿಡ್ 19ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿದ್ದು, ಸರ್ಕಾರವು ಇದನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ವಿಷಮಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಸರ್ಕಾರವನ್ನು ರದ್ದುಗೊಳಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಆಮ್ಲಜನಕ ಕೊರತೆಯಿಂದ ಮೊನ್ನೆ ಚಾಮರಾಜನಗರದಲ್ಲಿ 24 ಮತ್ತು ಕಲ್ಬುರ್ಗಿಯಲ್ಲಿ 2 ನಿನ್ನೆ ರಾಜ್ಯದಲ್ಲಿ 9 ಜನ ಕೋವಿಡ್19 ರೋಗಿಗಳು ಸತ್ತಿದ್ದು, ಅವರ ಸಾವಿಗೆ ರಾಜ್ಯ ಸರ್ಕಾರವು ನೇರಹೊಣೆಯಾಗಿದೆ. ರಾಜ್ಯ ಸರ್ಕಾರವು ಚಿಕಿತ್ಸೆಗೆ ಬಂದಿದ್ದ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸದೆ ಕತ್ತುಹಿಸುಕಿ ಉಸಿರುಗಟ್ಟಿಸಿ ಸಾಯಿಸಿದಂತಾಗಿದೆ ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಬೆಡ್ಗಳಿಗಾಗಿ ಸರತಿ ಕಾಯಬೇಕು, ಕಾಯಿಲೆ ಉಲ್ಬಣವಾದರೆ ಆಮ್ಲಜನಕ್ಕಾಗಿ ಸರತಿಯಲ್ಲಿರಬೇಕು. ಚಿಕಿತ್ಸೆ ಫಲಕಾರಿಯಾಗದೆ ಸತ್ತರೆ ಅಂತ್ಯಕ್ರಿಯೆ ನೇರವೇರಿಸಲು ಕೂಡ 20 ಗಂಟೆಗಳಕಾಲ ಸರತಿಯಲ್ಲಿ ಕಾಯಬೇಕು. ಕೆಲವು ಚಿತಾಗಾರದಲ್ಲಿ ಹೌಸ್ಪುಲ್ ಎಂದು ಫಲಕಗಳನ್ನು ಹಾಕಿರುವುದೂ ಕಂಡಿವೆ. ಇಂಥ ಮನ ಕುಲಕುವ ವಿಷಯಗಳಿಂದ ಜನಸಾಮಾನ್ಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.